16.06.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವೀಗ ಸತ್ಯ-ಸತ್ಯ ರಾಜಯೋಗಿಗಳಾಗಿದ್ದೀರಿ, ನಿಮಗೆ ರಾಜ ಋಷಿ ಎಂದೂ ಹೇಳಲಾಗುತ್ತದೆ, ರಾಜ ಋಷಿ ಎಂದರೆ ಪವಿತ್ರರು”

ಪ್ರಶ್ನೆ:
ನೀವು ಮಕ್ಕಳು ಮನುಷ್ಯರನ್ನು ಮಾಯಾರೂಪಿ ರಾವಣನ ಕೆಸರಿನಿಂದ ಯಾವಾಗ ಹೊರ ತೆಗೆಯಬಲ್ಲಿರಿ?

ಉತ್ತರ:
ಯಾವಾಗ ನೀವು ಸ್ವಯಂ ಆ ಕೆಸರಿನಿಂದ ಹೊರ ಬರುತ್ತೀರೋ ಆಗಲೇ ಅನ್ಯರನ್ನು ಹೊರ ತೆಗೆಯಲು ಸಾಧ್ಯ. ಕೆಸರಿನಿಂದ ಹೊರ ಬಂದಿರುವವರ ಚಿಹ್ನೆಯಾಗಿದೆ - ಇಚ್ಛಾ ಮಾತ್ರಂ ಅವಿದ್ಯಾ. ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು. ಒಳ್ಳೆಯ ಬಟ್ಟೆಗಳನ್ನು ಧರಿಸುವ, ಒಳ್ಳೆಯ ಪದಾರ್ಥಗಳನ್ನು ಸೇವಿಸುವ..... ಈ ಲಾಲಸೆಯಿರಬಾರದು. ನೀವು ಪೂರ್ಣ ವನವಾಸದಲ್ಲಿದ್ದೀರಿ. ಈ ಶರೀರವನ್ನೂ ಸಹ ಮರೆಯಬೇಕು. ನನ್ನದೇನೂ ಇಲ್ಲ, ನಾನಾತ್ಮನಾಗಿದ್ದೇನೆ - ಇಂತಹ ಆತ್ಮಾಭಿಮಾನಿ ಮಕ್ಕಳೇ ರಾವಣನ ಕೆಸರಿನಿಂದ ಮನುಷ್ಯರನ್ನು ಹೊರ ತೆಗೆಯಬಲ್ಲರು.

ಗೀತೆ:
ನೀವು ಪ್ರೀತಿಯ ಸಾಗರನಾಗಿದ್ದೀರಿ.............

ಓಂ ಶಾಂತಿ.
ಕೆಲವೊಮ್ಮೆ ಯಾವುದಾದರೂ ಗೀತೆಯನ್ನು ಹಾಕಿದಾಗ ಮಕ್ಕಳಿಂದ ಗೀತೆಯ ಅರ್ಥವನ್ನೂ ಕೇಳುತ್ತಿದ್ದೆವು. ಈಗ ತಿಳಿಸಿ, ನೀವು ಯಾವಾಗಿನಿಂದ ಮಾರ್ಗವನ್ನು ಮರೆತಿದ್ದೀರಿ? (ಕೆಲವರು ದ್ವಾಪರದಿಂದ ಎಂದು ಹೇಳಿದರು, ಇನ್ನೂ ಕೆಲವರು ಸತ್ಯಯುಗದಿಂದ ಎಂದು ಹೇಳಿದರು) ಯಾರು ದ್ವಾಪರದಿಂದ ಮರೆತಿದ್ದೇವೆ ಎಂದು ಹೇಳಿದರೋ ಅವರದು ತಪ್ಪಾಗಿದೆ, ಸತ್ಯಯುಗದಿಂದ ಮಾರ್ಗವನ್ನು ಮರೆತಿದ್ದೀರಿ. ಮಾರ್ಗವನ್ನು ತಿಳಿಸುವವರು, ಈಗ ನಿಮಗೆ ಸಿಕ್ಕಿದ್ದಾರೆ. ಸತ್ಯಯುಗದಲ್ಲಿ ಮಾರ್ಗ ತಿಳಿಸುವವರನ್ನು ಅರಿತುಕೊಂಡಿರುವುದೇ ಇಲ್ಲ, ಅಲ್ಲಿ ಯಾರೂ ಸಹ ತಂದೆಯನ್ನೇ ತಿಳಿದುಕೊಂಡಿರುವುದಿಲ್ಲ ಅಂದರೆ ಮರೆತು ಹೋಗಿರುತ್ತಾರೆ. ಮರೆಯುವುದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಪುನಃ ಈಗ ಮಾರ್ಗವನ್ನು ತಿಳಿಸಲು ಬಂದಿದ್ದಾರೆ. ಪ್ರಭು ಮಾರ್ಗವನ್ನು ತಿಳಿಸಿ, ನಾವು ಸತ್ಯಯುಗದಿಂದ ಹಿಡಿದು ತಂದೆಯನ್ನು ಮರೆತಿದ್ದೇವೆ ಎಂದು ಹೇಳುತ್ತಾರೆ. ಬುದ್ಧಿಯನ್ನು ಓಡಿಸುವುದಕ್ಕಾಗಿ ತಂದೆಯು ಪ್ರಶ್ನೆಯನ್ನು ಕೇಳುತ್ತಾರೆ. ಈ ಜ್ಞಾನವೇ ಭಿನ್ನವಾಗಿದೆಯಲ್ಲವೆ. ಜ್ಞಾನ ಸಾಗರನು ತಂದೆಯೇ ಆಗಿದ್ದಾರೆ, ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ – ಜ್ಞಾನ ಸಾಗರ, ಸುಖದ ಸಾಗರನು ನಾನೇ ಆಗಿದ್ದೇನೆ. ಖಂಡಿತವಾಗಿಯೂ ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ ಎಂಬುದನ್ನು ನೀವೂ ತಿಳಿದುಕೊಂಡಿದ್ದೀರಿ. ಇದನ್ನು ಭಕ್ತಿ ಮಾರ್ಗದವರೂ ಒಪ್ಪುತ್ತಾರೆ. ಪಾವನ ಪ್ರಪಂಚವು ಶಾಂತಿಧಾಮ ಮತ್ತು ಸುಖಧಾಮವಾಗಿದೆ. ಈಗ ಸುಖಧಾಮ ಮತ್ತು ದುಃಖಧಾಮವು ಅರ್ಧ-ಅರ್ಧ ಭಾಗವಾಗಿದೆ. ಇದನ್ನು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಆದ್ದರಿಂದಲೇ ಎಲ್ಲರೂ ಅವರನ್ನು ತಂದೆ ಎಂದು ಹೇಳಿ ಕೂಗುತ್ತಾರೆ. ಆದರೆ ಅವರು ಯಾರು, ಹೇಗೆ ಬರುತ್ತಾರೆ ಎಂಬುದನ್ನು ಮರೆತು ಹೋಗುತ್ತಾರೆ. ಇದು 5000 ವರ್ಷಗಳ ಮಾತಾಗಿದೆ, ಖಂಡಿತವಾಗಿಯೂ ಈ ದೇವಿ-ದೇವತೆಗಳ ರಾಜ್ಯವಿತ್ತು, ಸತ್ಯಯುಗದಲ್ಲಿ ಸದ್ಗತಿಯಿರುತ್ತದೆ ಮತ್ತೆ ಹೇಗೆ ದುರ್ಗತಿಯಾಗುತ್ತದೆ ಎಂಬುದನ್ನು ಯಾರು ತಿಳಿಸುವರು? ತಂದೆಯೇ ಬಂದು ತಿಳಿಸುತ್ತಾರೆ, ದ್ವಾಪರದಿಂದ ನಿಮ್ಮದು ದುರ್ಗತಿಯಾಗಿದೆ ಆದ್ದರಿಂದಲೇ ಕರೆಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಇದೇನೂ ಹೊಸ ಮಾತಲ್ಲ, ತಂದೆಯು ಕಲ್ಪ-ಕಲ್ಪವೂ ಬರುತ್ತಾರೆ. ಈಗ ನಿರಾಕಾರ ತಂದೆಯು ಆತ್ಮರಿಗೆ ತಿಳಿಸುತ್ತಾರೆ, ಯಾರೂ ಸಹ ತಮ್ಮ ಆತ್ಮನನ್ನು ತಿಳಿದುಕೊಂಡಿಲ್ಲ. ನಾನಾತ್ಮನಲ್ಲಿ ಇಡೀ ಪಾತ್ರವು ಅಡಕವಾಗಿದೆ ಎಂಬ ಮಾತನ್ನು ಎಂದೂ ಯಾರೂ ಹೇಳುವುದಿಲ್ಲ. ನಾನು ಅನೇಕ ಬಾರಿ ಈ ಪಾತ್ರಧಾರಿಯಾಗಿದ್ದೇನೆ, ಪಾತ್ರವನ್ನಭಿನಯಿಸಿದ್ದೇನೆ ಎಂಬುದನ್ನೂ ಕೂಡ ಹೇಳುವುದಿಲ್ಲ ಏಕೆಂದರೆ ಅವರು ನಾಟಕವನ್ನೇ ಅರಿತುಕೊಂಡಿಲ್ಲ. ಭಲೆ ಲಕ್ಷಾಂತರ ವರ್ಷಗಳೆಂದು ಹೇಳಬಹುದು, ಆದರೆ ಅದೂ ಸಹ ನಾಟಕವೇ ಅಲ್ಲವೆ. ನಾಟಕವು ಪುನರಾವರ್ತನೆಯಾಗುತ್ತದೆ, ಇದನ್ನಂತೂ ಹೇಳುತ್ತಾರಲ್ಲವೆ. ಈ ಜ್ಞಾನವನ್ನು ತಂದೆಯೇ ಸನ್ಮುಖದಲ್ಲಿ ಮಕ್ಕಳಿಗೆ ಕೊಡುತ್ತಾರೆ, ಮುಖದಿಂದ ಮಾತನಾಡುತ್ತಿದ್ದಾರೆ. ನೀವೂ ತಿಳಿದುಕೊಂಡಿದ್ದೀರಿ, ಶಿವ ತಂದೆಯು ನಮ್ಮನ್ನು ಬ್ರಹ್ಮಾರವರ ಮೂಲಕ ತನ್ನವರನ್ನಾಗಿ ಮಾಡಿಕೊಂಡು ಬ್ರಾಹ್ಮಣರನ್ನಾಗಿ ಮಾಡಿದ್ದಾರೆ. ಶಿವ ತಂದೆಗೆ ಇವರು (ಬ್ರಹ್ಮಾ) ಮಗನೂ ಆಗಿದ್ದಾರೆ, ಪತ್ನಿಯೂ ಆಗಿದ್ದಾರೆ. ನೋಡಿ, ಎಷ್ಟೊಂದು ಮಂದಿ ಮಕ್ಕಳ ಸಂಭಾಲನೆ ಮಾಡಬೇಕಾಗುತ್ತದೆ. ಒಂಟಿಯಾಗಿರುವ ಕಾರಣ ಮಕ್ಕಳನ್ನು ಸಂಭಾಲನೆ ಮಾಡಲು ಸರಸ್ವತಿಯನ್ನು ಸಹಯೋಗಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ಮಾತುಗಳು ಶಾಸ್ತ್ರಗಳಲ್ಲಿಲ್ಲ. ಇದು ವಾಸ್ತವಿಕವಾಗಿದೆ. ತಂದೆಯೇ ರಾಜಯೋಗವನ್ನು ಕಲಿಸುತ್ತಾರೆ, ಯಾರಿಗೆ ರಾಜಯೋಗವನ್ನು ಕಲಿಸಿದರೋ ಅವರು ರಾಜರಾದರು, 84 ಜನ್ಮಗಳಲ್ಲಿ ಬಂದರು. ಬೈಬಲ್, ಖುರಾನ್, ವೇದ-ಶಾಸ್ತ್ರ ಇತ್ಯಾದಿಗಳನ್ನು ಬಹಳಷ್ಟು ಓದುತ್ತಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ನೀವೀಗ ತತ್ವ ಯೋಗಿಗಳಲ್ಲ, ನಿಮ್ಮದು ತಂದೆಯೊಂದಿಗೆ ಯೋಗವಿದೆ ಅರ್ಥಾತ್ ತಂದೆಯ ನೆನಪಿದೆ. ನೀವೀಗ ರಾಜಯೋಗಿ, ರಾಜ ಋಷಿಗಳಾಗಿದ್ದೀರಿ ಅರ್ಥಾತ್ ಯೋಗಿ ರಾಜರಾಗಿದ್ದೀರಿ. ಪವಿತ್ರರಿಗೆ ಯೋಗಿಗಳೆಂದು ಹೇಳಲಾಗುತ್ತದೆ. ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಲು ನೀವು ಯೋಗಿಗಳಾಗಿದ್ದೀರಿ. ತಂದೆಯು ಮೊಟ್ಟ ಮೊದಲು ತಿಳಿಸುತ್ತಾರೆ - ಮಕ್ಕಳೇ, ಪವಿತ್ರರಾಗಿರಿ. ಯೋಗಿ ಹೆಸರೇ ಅವರದಾಗಿದೆ. ನೀವೆಲ್ಲರೂ ರಾಜಯೋಗಿಗಳಾಗಿದ್ದೀರಿ. ಇದು ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರ ಮಾತಾಗಿದೆ. ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಅಂದಮೇಲೆ ನೀವು ವಿದ್ಯಾರ್ಥಿಗಳಾದಿರಲ್ಲವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಎಂದಾದರೂ ಮರೆತು ಹೋಗುವರೇ? ನಿಮಗೆ ತಿಳಿದಿದೆ – ಶಿವ ತಂದೆಯು ನಮಗೆ ಓದಿಸುತ್ತಿದ್ದಾರೆ, ಆದರೂ ಸಹ ಮಾಯೆಯು ಮರೆಸಿ ಬಿಡುತ್ತದೆ. ನೀವು ತಮ್ಮ ಓದಿಸುವಂತಹ ಶಿಕ್ಷಕರನ್ನೇ ಮರೆತು ಹೋಗುತ್ತೀರಿ. ಭಗವಂತನು ಓದಿಸುತ್ತಾರೆ ಎಂದು ತಿಳಿದಾಗಲೇ ನಶೆಯೇರುವುದು. ಶಾಲೆಯಲ್ಲಿ ಐ.ಸಿ.ಎಸ್., ಓದುತ್ತಾರೆಂದರೆ ಎಷ್ಟೊಂದು ನಶೆಯಿರುತ್ತದೆ. ನೀವು ಮಕ್ಕಳಂತೂ 21 ಜನ್ಮಗಳಿಗಾಗಿ ರಾಜಯೋಗದ ವಿದ್ಯೆಯನ್ನು ಓದುತ್ತಿದ್ದೀರಿ. ಮತ್ತೆ ಓದಲೇ ಬೇಕಾಗುತ್ತದೆ. ರಾಜ ವಿದ್ಯೆಯನ್ನೂ ಓದಬೇಕಾಗಿದೆ, ಭಾಷೆ ಇತ್ಯಾದಿಗಳನ್ನೂ ಕಲಿಯಬೇಕಾಗಿದೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಸತ್ಯಯುಗದಿಂದ ನಾವು ಈ ಮಾರ್ಗವನ್ನು ಮರೆಯುವುದನ್ನು ಆರಂಭಿಸುತ್ತೇವೆ. ನಂತರ ಒಂದೊಂದು ಜನ್ಮದಲ್ಲಿ ಕೆಳಗಿಳಿಯುತ್ತೇವೆ. ಈಗ ನಿಮಗೆ ಎಲ್ಲವೂ ನೆನಪಿದೆ, ನಾವು ಹೇಗೆ ಏರುತ್ತೇವೆ, ಹೇಗೆ ಕೆಳಗಿಳಿಯುತ್ತೇವೆ ಎಂದು. ಈ ಏಣಿಯಲ್ಲಿ ಚೆನ್ನಾಗಿ ನೆನಪು ಮಾಡಿಕೊಳ್ಳಿ, 84 ಜನ್ಮಗಳು ಮುಕ್ತಾಯವಾಯಿತು, ನಾವೀಗ ಹೋಗಬೇಕಾಗಿದೆ ಆದ್ದರಿಂದ ಖುಷಿಯಾಗುತ್ತದೆ, ಇದು ಬೇಹದ್ದಿನ ನಾಟಕವಾಗಿದೆ. ಆತ್ಮವು ಎಷ್ಟು ಚಿಕ್ಕದಾಗಿದೆ, ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಆತ್ಮವು ಸುಸ್ತಾಗಿ ಬಿಟ್ಟರೆ ಆಗ ಬಾಬಾ, ಮಾರ್ಗವನ್ನು ತಿಳಿಸಿ ಅದರಿಂದ ನಾವು ವಿಶ್ರಾಂತಿ ಪಡೆಯುವೆವು, ಸುಖ-ಶಾಂತಿಯನ್ನು ಪಡೆಯುವೆವು ಎಂದು ಹೇಳುತ್ತದೆ. ನೀವು ಸುಖಧಾಮದಲ್ಲಿದ್ದಾಗ ನಿಮಗಾಗಿ ಅಲ್ಲಿ ಸುಖವೂ ಇರುತ್ತದೆ, ಶಾಂತಿಯೂ ಇರುತ್ತದೆ. ಯಾವುದೇ ಏರುಪೇರುಗಳಿರುವುದಿಲ್ಲ, ಆತ್ಮಕ್ಕೆ ಶಾಂತಿಯಿರುತ್ತದೆ. ಶಾಂತಿಗೆ ಎರಡು ಸ್ಥಾನಗಳಿವೆ - ಶಾಂತಿಧಾಮ ಮತ್ತು ಸುಖಧಾಮ. ದುಃಖಧಾಮದಲ್ಲಿ ಅಶಾಂತಿಯಿದೆ, ಇದು ವಿದ್ಯೆಯಾಗಿದೆ. ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮ್ಮನ್ನು ಶಾಂತಿಧಾಮದ ಮೂಲಕ ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ನಿಮಗೆ ಹೇಳುವ ಅವಶ್ಯಕತೆಯಿಲ್ಲ, ನಾವಿಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೇವೆ ಮತ್ತೆ ಹೋಗಬೇಕಾಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ - ನಿಮಗೆ ಈ ಖುಷಿಯಿದೆ. ಶಾಂತಿಯ ಖುಷಿಯಿಲ್ಲ, ನಮಗೆ ಆನಂದವಾಗುತ್ತದೆ, ಖುಷಿಯಾಗುತ್ತದೆ ಏಕೆಂದರೆ ತಿಳಿದಿದೆ, ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಕೆಲವರು ನಮಗೆ ಮನಃಶ್ಯಾಂತಿ ಬೇಕೆಂದು ಬಯಸುತ್ತಾರೆ. ಈ ಅಕ್ಷರವೂ ತಪ್ಪಾಗಿದೆ. ನಾವು ತಂದೆಯನ್ನು ನೆನಪು ಮಾಡುವುದೇ ವಿಕರ್ಮಗಳು ವಿನಾಶವಾಗಲಿ ಎಂದು. ಮನಸ್ಸಂತೂ ಇಲ್ಲಿ ಶಾಂತವಾಗಿರಲು ಸಾಧ್ಯವಿಲ್ಲ, ಕರ್ಮ ಮಾಡದೇ ಇರಲು ಸಾಧ್ಯವಿಲ್ಲ. ಆದರೆ ಅನುಭೂತಿಯಾಗುತ್ತದೆ. ನಾವು ತಂದೆಯಿಂದ ಸುಖ, ಶಾಂತಿ, ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಅಂದಮೇಲೆ ಖುಷಿಯಿರಬೇಕು. ಇದಂತೂ ದುಃಖಧಾಮವಾಗಿದೆ, ಇದರಲ್ಲಿ ಸುಖವಿಲ್ಲ. ಮನುಷ್ಯರು ಶಾಂತಿಧಾಮ, ಸುಖಧಾಮವನ್ನು ಮರೆತು ಹೋಗಿದ್ದಾರೆ ಆದ್ದರಿಂದ ಯಾರಿಗೆ ಬಹಳಷ್ಟು ಹಣವಿದೆಯೋ ಅವರು ನಾವು ಇಲ್ಲಿಯೇ ಸುಖದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಸನ್ಯಾಸಿಗಳು ಮನೆ ಮಠವನ್ನು ಬಿಟ್ಟು ಕಾಡಿಗೆ ಹೋಗುತ್ತಾರೆ. ಯಾವುದೇ ಹೊಡೆದಾಟವಿರುವುದಿಲ್ಲ ಆದ್ದರಿಂದ ಶಾಂತವಾಗಿ ಬಿಡುತ್ತಾರೆ ಆದರೆ ಅದು ಅಲ್ಪಕಾಲಕ್ಕಾಗಿ. ಆತ್ಮದ ಸ್ವಧರ್ಮವು ಶಾಂತಿಯಾಗಿದೆ. ನೀವು ಆ ಶಾಂತಿಯಲ್ಲಿರುತ್ತೀರಿ, ಇಲ್ಲಂತೂ ಪ್ರವೃತ್ತಿಯಲ್ಲಿ ಬರಲೇಬೇಕಾಗಿದೆ, ಪಾತ್ರವನ್ನಭಿನಯಿಸಲೇ ಬೇಕಾಗಿದೆ. ಇಲ್ಲಿ ಬರುವುದೇ ಕರ್ಮ ಮಾಡುವುದಕ್ಕಾಗಿ. ಆತ್ಮವು ಅವಶ್ಯವಾಗಿ ಕರ್ಮದಲ್ಲಿ ಬರಲೇಬೇಕಾಗಿದೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ತಿಳುವಳಿಕೆಯನ್ನು ಬೇಹದ್ದಿನ ತಂದೆಯು ಕೊಡುತ್ತಿದ್ದಾರೆ. ನಿರಾಕಾರ ಭಗವಾನುವಾಚ - ನೀವೀಗ ತಿಳಿದುಕೊಂಡಿದ್ದೀರಿ, ನಾವಾತ್ಮರಾಗಿದ್ದೇವೆ ನಮ್ಮ ತಂದೆಯು ಪರಮ ಆತ್ಮನಾಗಿದ್ದಾರೆ. ಪರಮ ಆತ್ಮ ಎಂದರೆ ಪರಮಾತ್ಮ. ಅವರನ್ನು ಈ ಆತ್ಮವು ಕರೆಯುತ್ತದೆ. ಆ ತಂದೆಯೇ ಸರ್ವರ ಸದ್ಗತಿದಾತನಾಗಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗಿರಿ. ಇದೇ ಪರಿಶ್ರಮವಿದೆ. ಅರ್ಧ ಕಲ್ಪದಿಂದ ಯಾವ ತುಕ್ಕು ಹಿಡಿದಿದೆಯೋ ಅದು ಈ ನೆನಪಿನಿಂದಲೇ ಬಿಟ್ಟು ಹೋಗುವುದು. ನೀವು ಸತ್ಯ ಚಿನ್ನವಾಗಬೇಕಾಗಿದೆ. ಹೇಗೆ ಸತ್ಯ ಚಿನ್ನದಲ್ಲಿ ಮಿಶ್ರ ಮಾಡಿ ಆಭರಣಗಳನ್ನು ತಯಾರಿಸುತ್ತಾರೆ, ನೀವು ಮೂಲತಃ ಸತ್ಯ ಚಿನ್ನವಾಗಿದ್ದಿರಿ, ನಂತರ ನಿಮ್ಮಲ್ಲಿ ತುಕ್ಕು ಹಿಡಿಯಿತು. ಈಗ ನಿಮ್ಮ ಬುದ್ಧಿಯಲ್ಲಿದೆ, ನಾವು ಪಾತ್ರವನ್ನಭಿನಯಿಸಿದ್ದೇವೆ, ನಾವೀಗ ತಂದೆಯ ಮನೆಗೆ ಹೋಗುತ್ತೇವೆ. ಹೇಗೆ ವಿದೇಶದಿಂದ ತನ್ನ ಮನೆಗೆ ಹಿಂತಿರುಗುವಾಗ ಖುಷಿಯಾಗುತ್ತದೆ, ನಿಮಗೂ ಖುಷಿಯಿದೆ. ನಿಮಗೆ ತಿಳಿದಿದೆ, ತಂದೆಯು ನಮಗಾಗಿ ಸ್ವರ್ಗವನ್ನು ತಂದಿದ್ದಾರೆ. ಬೇಹದ್ದಿನ ರಾಜ್ಯ ಭಾಗ್ಯ ಅರ್ಥಾತ್ ಸದ್ಗತಿ ಬೇಹದ್ದಿನ ತಂದೆಯ ಉಡುಗೊರೆಯಾಗಿದೆ. ಸನ್ಯಾಸಿಗಳು ಮುಕ್ತಿಯ ಉಡುಗೊರೆಯನ್ನು ಇಷ್ಟ ಪಡುತ್ತಾರೆ. ಯಾರಾದರೂ ಶರೀರ ಬಿಟ್ಟರೂ ಸಹ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಯಿತು, ಅದರಲ್ಲಿ ಎಲ್ಲರೂ ಸಮಾವೇಶವಾಗಿ ಬಿಡುವರು ಎಂದು ಸನ್ಯಾಸಿಗಳು ಹೇಳುತ್ತಾರೆ. ಅದಂತೂ ಇರುವ ಸ್ಥಾನವಾಗಿದೆ ಎಲ್ಲಿ ನಾವಾತ್ಮರಿರುತ್ತೇವೆ. ಬಾಕಿ ಎಲ್ಲರೂ ಸೇರಿ ಹೋಗಲು ಯಾವುದೇ ಜ್ಯೋತಿ ಅಥವಾ ಬೆಂಕಿಯಿಲ್ಲ, ಬ್ರಹ್ಮ ಮಹಾತತ್ವವಾಗಿದೆ. ಅದರಲ್ಲಿ ಆತ್ಮರಿರುತ್ತಾರೆ, ತಂದೆಯು ಅಲ್ಲಿರುತ್ತಾರೆ, ಅವರೂ ಸಹ ಬಿಂದುವಾಗಿದ್ದಾರೆ. ಯಾರಿಗಾದರೂ ಬಿಂದುವಿನ ಸಾಕ್ಷಾತ್ಕಾರವಾದರೆ ಅವರಿಗೆ ಅರ್ಥವಾಗುವುದಿಲ್ಲ. ಬಾಬಾ, ನೆನಪು ಮಾಡುವುದರಲ್ಲಿ ಕಷ್ಟವಾಗುತ್ತದೆ, ಬಿಂದು ರೂಪವನ್ನು ಹೇಗೆ ನೆನಪು ಮಾಡುವುದು? ಅರ್ಧ ಕಲ್ಪ ದೊಡ್ಡ ಲಿಂಗ ರೂಪವನ್ನು ನೆನಪು ಮಾಡಿದೆವು ಎಂದು ಅನೇಕ ಮಕ್ಕಳು ಹೇಳುತ್ತಾರೆ. ಅದನ್ನೂ ತಂದೆಯು ತಿಳಿಸುತ್ತಾರೆ. ಬಿಂದುವಿಗೆ ಪೂಜೆಯಂತೂ ಮಾಡಲು ಸಾಧ್ಯವಿಲ್ಲ. ಇವರ ಮಂದಿರವನ್ನು ಹೇಗೆ ಕಟ್ಟಿಸುತ್ತೀರಿ? ಬಿಂದುವಂತೂ ಕಣ್ಣಿಗೂ ಕಾಣಿಸುವುದಿಲ್ಲ ಆದ್ದರಿಂದ ಶಿವ ಲಿಂಗವನ್ನು ದೊಡ್ಡದಾಗಿ ಮಾಡಿಸುತ್ತಾರೆ. ಬಾಕಿ ಸಾಲಿಗ್ರಾಮಗಳನ್ನು ಬಹಳ ಚಿಕ್ಕ-ಚಿಕ್ಕ ಗಾತ್ರದಲ್ಲಿ ಮಾಡಿಸುತ್ತಾರೆ, ಅಂಡಾಕಾರವಾಗಿ ಮಾಡುತ್ತಾರೆ. ಪರಮಾತ್ಮನು ಬಿಂದು ರೂಪನೆಂದು ಮೊದಲೇ ಏಕೆ ತಿಳಿಸಲಿಲ್ಲ ಎಂದು ಕೆಲವರು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ, ಆ ಸಮಯದಲ್ಲಿ ಇದನ್ನು ತಿಳಿಸುವ ಪಾತ್ರವೇ ಇರಲಿಲ್ಲ. ಅರೆ! ನೀವು ಐ.ಸಿ.ಎಸ್., ವಿದ್ಯೆಯನ್ನು ಆರಂಭದಿಂದಲೇ ಏಕೆ ಓದುವುದಿಲ್ಲ? ವಿದ್ಯಾಭ್ಯಾಸಕ್ಕೂ ನಿಯಮವಿದೆಯಲ್ಲವೆ. ಯಾರಾದರೂ ಇಂತಹ ಮಾತನ್ನು ಕೇಳಿದರೆ ನೀವು ಹೇಳಿರಿ - ಒಳ್ಳೆಯದು, ನಾವು ತಂದೆಯೊಂದಿಗೆ ಕೇಳುತ್ತೇವೆ ಅಥವಾ ನಮ್ಮ ಹಿರಿಯ ಸಹೋದರಿಯರಿಂದ ಕೇಳಿ ತಿಳಿಸುತ್ತೇವೆ. ತಂದೆಗೆ ತಿಳಿಸುವುದಿದ್ದರೆ ತಿಳಿಸಿ, ಇಲ್ಲದಿದ್ದರೆ ಮುಂದೆ ಹೋದಂತೆ ತಿಳಿದುಕೊಳ್ಳುತ್ತೀರಿ ಎಂದು ಹೇಳಿರಿ. ಒಂದೇ ಸಲ ತಿಳಿಸಿ ಬಿಡುವುದಿಲ್ಲ, ಇವೆಲ್ಲವೂ ಹೊಸ ಮಾತುಗಳಾಗಿವೆ. ನಿಮ್ಮ ವೇದ-ಶಾಸ್ತ್ರಗಳಲ್ಲಿರುವುದನ್ನು ತಂದೆಯು ಸಾರ ರೂಪದಲ್ಲಿ ತಿಳಿಸಿದ್ದಾರೆ. ಈ ಭಕ್ತಿ ಮಾರ್ಗವೂ ಸಹ ನಿಗಧಿಯಾಗಿದೆ, ನೀವು ಪುನಃ ಓದಲೇಬೇಕಾಗುವುದು. ಈ ಭಕ್ತಿಯ ಪಾತ್ರವನ್ನು ಅಭಿನಯಿಸಲೇ ಬೇಕಾಗುವುದು. ಮತ್ತೆ ದ್ವಾಪರದಿಂದ ಪತಿತರಾಗುವ ಪಾತ್ರವನ್ನೂ ಅಭಿನಯಿಸಬೇಕಾಗಿದೆ. ಈಗ ಪುನಃ ಪಾವನರಾಗಬೇಕಾಗಿದೆ. ಭಕ್ತಿಯ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ ಎಂದು ಭಕ್ತರು ಹೇಳುತ್ತಾರೆ. ಭಕ್ತಿಯು ಬಾಹ್ಯವಾಗಿ ಬಹಳ ಸುಂದರವಾಗಿ ಕಾಣುತ್ತದೆ, ಹೇಗೆ ಬಿಸಿಲ್ಗುದುರೆಯ ಉದಾಹರಣೆಯನ್ನು ಕೊಡುತ್ತಾರೆ. ಭಕ್ತಿಯೂ ಸಹ ಬಹಳ ಆಕರ್ಷಕವಾಗಿದೆ. ತಂದೆಯು ತಿಳಿಸುತ್ತಾರೆ - ಇದು ಬಿಸಿಲ್ಗುದುರೆಯ ಸಮಾನವಾಗಿದೆ (ಮೃಗ ತೃಷ್ಣ ಸಮಾನ) ಇದರಲ್ಲಿ ಎಲ್ಲರೂ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮತ್ತೆ ಅದರಿಂದ ಹೊರ ಬರುವುದು ಕಷ್ಟವಾಗಿ ಬಿಡುತ್ತದೆ. ಅನ್ಯರನ್ನು ಹೊರ ತೆಗೆಯಲು ಹೋಗಿ ತಾವೇ ಸಿಲುಕುತ್ತಾರೆ. ಹೀಗೆ ಅನೇಕರು ಸಿಕ್ಕಿ ಹಾಕಿಕೊಂಡರು. ಆಶ್ಚರ್ಯವೆನಿಸುವಂತೆ ಕೇಳುತ್ತಾ, ನಡೆಯುತ್ತಾ, ಅನ್ಯರನ್ನೂ ಹೊರ ತೆಗೆಯುತ್ತಾ ಮತ್ತೆ ತಾವೇ ಹೋಗಿ ಸಿಲುಕುತ್ತಾರೆ. ಎಷ್ಟು ಒಳ್ಳೊಳ್ಳೆಯ ಮಕ್ಕಳಿದ್ದರು, ಮತ್ತೆ ಅವರನ್ನು ಅಲ್ಲಿಂದ ಹೊರ ತೆಗೆಯುವುದೇ ಕಷ್ಟವಾಗಿ ಬಿಡುತ್ತದೆ. ತಂದೆಯನ್ನೇ ಮರೆತು ಹೋಗುತ್ತಾರೆ ಆದ್ದರಿಂದ ಕೆಸರಿನಿಂದ ಹೊರ ತೆಗೆಯುವುದರಲ್ಲಿ ಎಷ್ಟೊಂದು ಪರಿಶ್ರಮವಾಗುತ್ತದೆ! ಮತ್ತೆ ಎಷ್ಟಾದರೂ ತಿಳಿಸಿ, ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ನೀವೀಗ ತಿಳಿದುಕೊಳ್ಳಬಹುದು - ನಾವು ಮಾಯಾರೂಪಿ ರಾವಣನ ಕೆಸರಿನಿಂದ ಎಷ್ಟು ಹೊರ ಬಂದಿದ್ದೇವೆ ಎಂದು. ಎಷ್ಟೆಷ್ಟು ಹೊರ ಬರುತ್ತೀರೋ ಅಷ್ಟು ಖುಷಿಯಿರುತ್ತದೆ, ಯಾರು ಸ್ವಯಂ ಹೊರ ಬಂದಿರುವರೋ ಅವರ ಬಳಿ ಇನ್ನೊಬ್ಬರನ್ನೂ ಹೊರ ತೆಗೆಯುವ ಶಕ್ತಿಯಿರುತ್ತದೆ. ಬಾಣ ಹೊಡೆಯುವವರು ಕೆಲವರು ತೀಕ್ಷ್ಣವಾಗಿರುತ್ತಾರೆ, ಕೆಲವರು ನಿರ್ಬಲರಾಗಿರುತ್ತಾರೆ. ಏಕಲವ್ಯ ಮತ್ತು ಅರ್ಜುನನ ಉದಾಹರಣೆಯಿದೆಯಲ್ಲವೆ. ಅರ್ಜುನನು ದ್ರೋಣಾಚಾರ್ಯರ ಜೊತೆಯಿರುತ್ತಿದ್ದನು, ವಾಸ್ತವದಲ್ಲಿ ಅರ್ಜುನನೆಂದು ಒಬ್ಬರಿಗಷ್ಟೇ ಹೇಳುವುದಿಲ್ಲ, ಯಾರು ತಂದೆಯವರಾಗಿ ತಂದೆಯ ಜೊತೆ ಇರುತ್ತಾರೆಯೋ ಅವರಿಗೆ ಅರ್ಜುನರೆಂದು ಹೇಳಲಾಗುತ್ತದೆ. ಜೊತೆಯಲ್ಲಿರುವವರು ಮತ್ತು ಹೊರಗಡೆಯಿರುವವರ ಸ್ಪರ್ಧೆ ಮಾಡಿಸಲಾಗುತ್ತದೆ. ಏಕಲವ್ಯ ಅರ್ಥಾತ್ ಹೊರಗಡೆ ಇರುವವರು ತೀಕ್ಷ್ಣವಾಗಿ ಮುಂದೆ ಹೋದರು, ಕೇವಲ ಒಬ್ಬರ ಉದಾಹರಣೆಯನ್ನು ಕೊಡಲಾಗುತ್ತದೆ. ಹೀಗೆ ಅನೇಕರ ಉದಾಹರಣೆಯಿದೆ. ಬಾಣವೂ ಸಹ ಈ ಜ್ಞಾನದ್ದಾಗಿದೆ. ಪ್ರತಿಯೊಬ್ಬರೂ ತಮ್ಮನ್ನು ತಿಳಿದುಕೊಳ್ಳಬಹುದು - ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ, ಮತ್ತ್ಯಾರ ನೆನಪೂ ಬರುವುದಿಲ್ಲವೆ! ಒಳ್ಳೆಯ ವಸ್ತುವನ್ನು ಧರಿಸುವ ಅಥವಾ ತಿನ್ನುವ ಲಾಲಸೆಯಂತೂ ಇಲ್ಲವೆ? ಒಂದುವೇಳೆ ಇಲ್ಲಿಯೇ ಒಳ್ಳೊಳ್ಳೆಯದನ್ನು ಧರಿಸಿ ಬಿಟ್ಟರೆ ಸತ್ಯಯುಗದಲ್ಲಿ ಕಡಿಮೆಯಾಗುವುದು. ನಾವಿಲ್ಲಿ ವನವಾಸದಲ್ಲಿರಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮ ಈ ಶರೀರವನ್ನೂ ಮರೆತು ಹೋಗಿ. ಇದು ಹಳೆಯ, ತಮೋಪ್ರಧಾನ ಶರೀರವಾಗಿದೆ. ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಇಚ್ಛಾ ಮಾತ್ರಂ ಅವಿದ್ಯಾ.

ನೀವಿಲ್ಲಿ ಆಭರಣ ಇತ್ಯಾದಿಗಳನ್ನೂ ಧರಿಸಬೇಡಿ ಎಂದು ತಂದೆಯು ಹೇಳುತ್ತಾರೆ, ಹೀಗೇಕೆ ಹೇಳುತ್ತಾರೆ? ಇದಕ್ಕೂ ಅನೇಕ ಕಾರಣಗಳಿವೆ. ಯಾರ ಆಭರಣಗಳಾದರೂ ಕಳುವಾಗಿ ಬಿಟ್ಟರೆ ಅಲ್ಲಿ ಬ್ರಹ್ಮಾಕುಮಾರ-ಕುಮಾರಿಯರಿಗೆ ಕೊಟ್ಟು ಬಂದಿದ್ದಾರೆ ಎಂದು ಹೇಳುತ್ತಾರೆ. ಇನ್ನೂ ಕೆಲವೊಮ್ಮೆ ಮಾರ್ಗ ಮಧ್ಯದಲ್ಲಿ ಕಳ್ಳಕಾಕರು ಕಸಿದುಕೊಳ್ಳುತ್ತಾರೆ. ಇತ್ತೀಚೆಗೆ ಕಳ್ಳರು ಬಹಳ ಮಂದಿ ಇದ್ದಾರೆ, ಸ್ತ್ರೀಯರೂ ಕಳ್ಳತನ ಮಾಡುತ್ತಾರೆ. ಪ್ರಪಂಚದ ಸ್ಥಿತಿ ನೋಡಿ, ಏನಾಗಿದೆ? ನೀವು ತಿಳಿದುಕೊಳ್ಳುತ್ತೀರಿ - ಪ್ರಪಂಚವು ಸಂಪೂರ್ಣ ವೇಶ್ಯಾಲಯವಾಗಿದೆ, ನಾವಿಲ್ಲಿ ಶಿವ ತಂದೆಯ ಜೊತೆ ಶಿವಾಲಯದಲ್ಲಿ ಕುಳಿತಿದ್ದೇವೆ, ಅವರು ಸತ್ಯ-ಚೈತನ್ಯನಾಗಿದ್ದಾರೆ, ಆನಂದ ಸ್ವರೂಪನಾಗಿದ್ದಾರೆ. ಆತ್ಮಕ್ಕೇ ಮಹಿಮೆಯಿದೆ. ನಾನು ರಾಷ್ಟ್ರಪತಿಯಾಗಿದ್ದೇನೆ, ನಾನು ಇದಾಗಿದ್ದೇನೆ... ಎಂದು ಆತ್ಮವೇ ಹೇಳುತ್ತದೆ ಮತ್ತು ನೀವಾತ್ಮರು ಹೇಳುತ್ತೀರಿ - ನಾವು ಬ್ರಾಹ್ಮಣರಾಗಿದ್ದೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆತ್ಮಾಭಿಮಾನದಲ್ಲಿ ಇರಬೇಕಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ಇದು ನನ್ನದಾಗಿದೆ, ಇದು ನನ್ನದಾಗಿದೆ.... ಎಂಬುದು ನೆನಪಿರುತ್ತದೆ, ನಾವಾತ್ಮರು ಸಹೋದರರಾಗಿದ್ದೇವೆ ಎಂಬುದನ್ನು ಮರೆತು ಹೋಗುತ್ತಾರೆ ಆದ್ದರಿಂದ ಇಲ್ಲಿ ನನ್ನದು-ನನ್ನದು ಎಂಬುದನ್ನು ಬಿಡಬೇಕಾಗುತ್ತದೆ. ನಾನಾತ್ಮನಾಗಿದ್ದೇನೆ, ಇವರ (ಬ್ರಹ್ಮಾ) ಆತ್ಮವೂ ಸಹ ತಿಳಿದುಕೊಳ್ಳುತ್ತದೆ. ತಂದೆಯು ತಿಳಿಸುತ್ತಿದ್ದಾರೆ - ನಾನೂ ಸಹ ಕೇಳುತ್ತಾ ಇರುತ್ತೇನೆ, ಮೊದಲು ನಾನು ಕೇಳುತ್ತೇನೆ. ಭಲೆ ನಾನೂ ಸಹ ತಿಳಿಸಬಲ್ಲೆನು ಆದರೆ ಮಕ್ಕಳ ಕಲ್ಯಾಣಾರ್ಥವಾಗಿ ತಿಳಿಸುತ್ತೇನೆ - ನೀವು ಸದಾ ತಿಳಿದುಕೊಳ್ಳಿ, ನಮಗೆ ಶಿವ ತಂದೆಯೇ ತಿಳಿಸುತ್ತಾರೆ. ವಿಚಾರ ಸಾಗರ ಮಂಥನ ಮಾಡುವುದು ಮಕ್ಕಳ ಕೆಲಸವಾಗಿದೆ. ಹೇಗೆ ನೀವು ಪುರುಷಾರ್ಥ ಮಾಡುತ್ತೀರೋ ಹಾಗೆಯೇ ನಾನೂ ಮಾಡುತ್ತೇನೆ. ಇಲ್ಲದಿದ್ದರೆ ಮೊದಲ ನಂಬರಿನಲ್ಲಿ ಹೇಗೆ ಬರುವೆನು? ಆದರೆತನ್ನನ್ನು ಗುಪ್ತವಾಗಿಟ್ಟುಕೊಳ್ಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನನ್ನದು, ನನ್ನದು ಎಂಬುದೆಲ್ಲವನ್ನೂ ಬಿಟ್ಟು ತನ್ನನ್ನು ಆತ್ಮನೆಂದು ತಿಳಿಯಬೇಕಾಗಿದೆ, ಆತ್ಮಾಭಿಮಾನಿಯಾಗಿರುವ ಪರಿಶ್ರಮ ಪಡಬೇಕಾಗಿದೆ. ಇಲ್ಲಿ ಸಂಪೂರ್ಣ ವನವಾಸದಲ್ಲಿರಬೇಕಾಗಿದೆ. ಯಾವುದೇ ಧರಿಸುವ-ತಿನ್ನುವ ಇಚ್ಛೆಯಿಂದ ಇಚ್ಛಾ ಮಾತ್ರಂ ಅವಿದ್ಯಾ ಆಗಬೇಕಾಗಿದೆ.

2. ಪಾತ್ರವನ್ನಭಿನಯಿಸುತ್ತಾ, ಕರ್ಮ ಮಾಡುತ್ತಾ ತಮ್ಮ ಶಾಂತಿ ಸ್ವಧರ್ಮದಲ್ಲಿ ಸ್ಥಿತರಾಗಿರಬೇಕಾಗಿದೆ. ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಈ ದುಃಖಧಾಮವನ್ನು ಮರೆಯಬೇಕಾಗಿದೆ.

ವರದಾನ:
ಆತ್ಮಿಕ ಸುಗಂಧ ಹಾಗೂ ದಯಾ ಗುಣದ ಮೂಲಕ ವಿಶ್ವ ನವ ನಿರ್ಮಾಣ ಮಾಡುವಂತಹ ವಿಶ್ವ ಕಲ್ಯಾಣಕಾರಿ ಭವ.

ವಿಶ್ವ ಕಲ್ಯಾಣಕಾರಿ ಆಗುವುದಕ್ಕಾಗಿ - ಮುಖ್ಯವಾಗಿ ಎರಡು ಧಾರಣೆಗಳ ಅವಶ್ಯಕತೆಯಿದೆ. ಒಂದು - ಈಶ್ವರೀಯ ಆತ್ಮಿಕ ಸುಗಂಧ ಹಾಗೂ ಇನ್ನೊಂದು - ದಯೆ. ಒಂದುವೇಳೆ ಇವೆರಡೂ ಒಟ್ಟೊಟ್ಟಿಗೆ ಹಾಗೂ ಸಮಾನವಾಗಿ ಇದ್ದರೆ ಆತ್ಮೀಯತೆಯ ಸ್ಥಿತಿಯಾಗಿ ಬಿಡುತ್ತದೆ. ಹಾಗಾದರೆ ಯಾವಾಗ ಯಾವುದೇ ಕರ್ತವ್ಯವನ್ನು ಮಾಡುತ್ತೀರಿ ಅಥವಾ ಮುಖದಿಂದ ಶಬ್ಧಗಳ ವರ್ಣನೆ ಮಾಡುತ್ತೀರೆಂದರೆ ಪರಿಶೀಲನೆ ಮಾಡಿರಿ - ದಯೆ ಹಾಗೂ ಆತ್ಮಿಕ ಸುಗಂಧವೆರಡೂ ಸಮಾನ ರೂಪದಲ್ಲಿದೆಯೇ? ಶಕ್ತಿಗಳ ಚಿತ್ರಗಳಲ್ಲಿ ಇವೆರಡು ಗುಣಗಳ ಸಮಾನತೆಯನ್ನು ತೋರಿಸುತ್ತಾರೆ. ಇದರ ಆಧಾರದ ಮೇಲೆ ವಿಶ್ವ ನವ ನಿರ್ಮಾಣದ ನಿಮಿತ್ತರಾಗಬಹುದು.

ಸ್ಲೋಗನ್:
ತಂದೆಯ ಪ್ರೀತಿಯಲ್ಲಿ ವ್ಯರ್ಥ ಸಂಕಲ್ಪಗಳನ್ನು ಅರ್ಪಣೆ ಮಾಡಿ ಬಿಡುವುದೇ ಸತ್ಯವಾದ ಅರ್ಪಣೆಯಾಗಿದೆ.

ಅವ್ಯಕ್ತ ಸೂಚನೆಗಳು:- ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.

ಯಾರು ಎಷ್ಟು ಸ್ವಯಂ ಸರಳವಾಗಿದ್ದಾರೆ ಅಷ್ಟೇ ನೆನಪು ಸರಳವಾಗಿರುವುದು. ಎಷ್ಟು ಯಾವ ಮಾತಿನಲ್ಲಿ ಸ್ಪಷ್ಟ ಅರ್ಥಾತ್ ಸ್ವಚ್ಛವಾಗಿರುವುದು ಅಷ್ಟು ಸರಳವಾಗಿರುವುದು. ಹೇಗೆ ಸ್ವಯಂ ಇರುತ್ತಾರೆ ಅವರ ರಚನೆಯಲ್ಲಿಯೂ ಅದೇ ಸಂಸ್ಕಾರವಿರುತ್ತದೆ. ಪ್ರತಿ ಗುಣದ ಪ್ರಾಕ್ಟಿಕಲ್ ಸ್ವರೂಪ ಉದಾಹರಣೆಯಾಗಿರಿ.