29.12.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಈಗ
ಮನೆಗೆ ಹೋಗಬೇಕಾಗಿದೆ, ಆದ್ದರಿಂದ ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ನನ್ನೊಬ್ಬನನ್ನೇ
ನೆನಪು ಮಾಡಿ ಮತ್ತು ಪಾವನರಾಗಿ"
ಪ್ರಶ್ನೆ:
ಆತ್ಮನ
ಸಂಬಂಧದಲ್ಲಿ ಯಾವ ಒಂದು ಸೂಕ್ಷ್ಮ ಮಾತನ್ನು ಸೂಕ್ಷ್ಮ ಬುದ್ಧಿಯವರೇ ತಿಳಿದುಕೊಳ್ಳಲು ಸಾಧ್ಯ?
ಉತ್ತರ:
1. ಆತ್ಮದಲ್ಲಿ
ಸೂಜಿಯ ತರಹ ನಿಧಾನ-ನಿಧಾನವಾಗಿ ತುಕ್ಕು ಏರುತ್ತಾ ಹೋಗಿದೆ ಅದು ತಂದೆಯ ನೆನಪಿನಲ್ಲಿದ್ದಾಗಲೇ
ಇಳಿಯುವುದು. ಯಾವಾಗ ತುಕ್ಕು ಇಳಿಯುವುದು ಅರ್ಥಾತ್ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗುವುದೋ
ಆಗ ತಂದೆಯ ಕಡೆ ಆಕರ್ಷಣೆಯಾಗುವುದು ಮತ್ತು ಅವರು ತಂದೆಯ ಜೊತೆ ಹಿಂತಿರುಗಿ ಹೋಗುವರು. 2. ಎಷ್ಟು
ತುಕ್ಕು ಇಳಿಯುತ್ತಾ ಹೋಗುವುದೋ ಅಷ್ಟು ಅನ್ಯರಿಗೆ ತಿಳಿಸುವುದರಲ್ಲಿ ಸೆಳೆತವಿರುತ್ತದೆ - ಈ
ಮಾತುಗಳು ಬಹಳ ಸೂಕ್ಷ್ಮವಾಗಿವೆ, ಇವನ್ನು ಮಂಧ ಬುದ್ಧಿಯವರು ತಿಳಿದುಕೊಳ್ಳಲು ಸಾಧ್ಯವಿಲ್ಲ.
ಓಂ ಶಾಂತಿ.
ಭಗವಾನುವಾಚ - ಈಗ ಬುದ್ಧಿಯಲ್ಲಿ ಯಾರು ಬಂದರು? ಹಾ! ಯಾವುದೆಲ್ಲಾ ಗೀತಾ ಪಾಠಶಾಲೆಗಳಿವೆಯೋ
ಅವುಗಳಲ್ಲಿ ಭಗವಾನುವಾಚವೆಂದು ಹೇಳಿದಾಗ ಅವರಿಗೆ ಕೃಷ್ಣನೇ ಬುದ್ಧಿಯಲ್ಲಿ ಬರುವನು. ಇಲ್ಲಿ ನೀವು
ಮಕ್ಕಳಿಗಂತೂ ಶ್ರೇಷ್ಠಾತಿ ಶ್ರೇಷ್ಠ ತಂದೆಯು ನೆನಪು ಬರುವರು. ಈ ಸಮಯದಲ್ಲಿ ಇದು
ಪುರುಷೋತ್ತಮರಾಗುವ ಸಂಗಮಯುಗವಾಗಿದೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ
ಸಂಬಂಧಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ. ಇದು ಅತ್ಯವಶ್ಯಕ ಮಾತಾಗಿದೆ. ಇದನ್ನು
ಸಂಗಮಯುಗದಲ್ಲಿಯೇ ತಂದೆಯು ತಿಳಿಸುತ್ತಾರೆ. ಆತ್ಮನೇ ಪತಿತವಾಗಿದೆ, ಮತ್ತೆ ಆತ್ಮನೇ ಪಾವನನಾಗಿ
ಮನೆಗೆ ಹೋಗಬೇಕಾಗಿದೆ. ಪತಿತ-ಪಾವನನನ್ನು ನೆನಪು ಮಾಡುತ್ತಾ ಬಂದಿದ್ದಾರೆ ಆದರೆ ಏನನ್ನೂ
ತಿಳಿದುಕೊಂಡಿಲ್ಲ. ಭಾರತವಾಸಿಗಳು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ಭಕ್ತಿಯು ರಾತ್ರಿ,
ಜ್ಞಾನವು ದಿನವಾಗಿದೆ. ರಾತ್ರಿಯಲ್ಲಿ ಅಂಧಕಾರ, ದಿನದಲ್ಲಿ ಪ್ರಕಾಶತೆಯಿರುತ್ತದೆ. ದಿನವು
ಸತ್ಯಯುಗವಾಗಿದೆ, ರಾತ್ರಿಯು ಕಲಿಯುಗವಾಗಿದೆ. ನೀವೀಗ ಕಲಿಯುಗದಲ್ಲಿದ್ದೀರಿ, ಸತ್ಯಯುಗದಲ್ಲಿ
ಹೋಗಬೇಕಾಗಿದೆ. ಪಾವನ ಪ್ರಪಂಚದಲ್ಲಿ ಪತಿತರ ಪ್ರಶ್ನೆಯೇ ಬರುವುದಿಲ್ಲ. ಯಾವಾಗ ಪತಿತರಾಗುತ್ತೀರೋ
ಆಗ ಪಾವನರಾಗುವ ಪ್ರಶ್ನೆ ಬರುತ್ತದೆ. ಯಾವಾಗ ಪಾವನರಾಗಿರುತ್ತೀರೋ ಆಗ ಪತಿತ ಪ್ರಪಂಚದ ನೆನಪೂ
ಇರುವುದಿಲ್ಲ. ಈಗ ಪತಿತ ಪ್ರಪಂಚವಾಗಿದೆ ಆದ್ದರಿಂದ ಪಾವನ ಪ್ರಪಂಚದ ನೆನಪು ಬರುತ್ತದೆ. ಪತಿತ
ಪ್ರಪಂಚವು ಕೊನೆಯ ಭಾಗವಾಗಿದೆ, ಪಾವನ ಪ್ರಪಂಚವು ಮೊದಲ ಭಾಗವಾಗಿದೆ. ಅಲ್ಲಿ ಯಾರೂ ಪತಿತರಿರಲು
ಸಾಧ್ಯವಿಲ್ಲ. ಯಾರು ಪಾವನರಿದ್ದರೋ ಅವರೇ ಮತ್ತೆ ಪತಿತರಾಗಿದ್ದೀರಿ. ಅವರದೇ 84 ಜನ್ಮಗಳೆಂದು
ತಿಳಿಸಲಾಗುತ್ತದೆ. ಇವು ಬಹಳ ತಿಳಿದುಕೊಳ್ಳುವ ಗುಹ್ಯ ಮಾತುಗಳಾಗಿವೆ. ಅರ್ಧ ಕಲ್ಪ ಭಕ್ತಿ
ಮಾಡಿದ್ದೀರಿ ಆದ್ದರಿಂದ ಅಷ್ಟು ಬೇಗನೆ ಬಿಟ್ಟು ಹೋಗಲು ಸಾಧ್ಯವಿಲ್ಲ. ಮನುಷ್ಯರು ಸಂಪೂರ್ಣ
ಅಂಧಕಾರದಲ್ಲಿದ್ದಾರೆ. ಕೋಟಿಯಲ್ಲಿ ಕೆಲವರೇ ಜ್ಞಾನವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಉಳಿದಂತೆ
ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ಕಷ್ಟ. ಮುಖ್ಯ ಮಾತನ್ನು ತಂದೆಯು ತಿಳಿಸುತ್ತಾರೆ -
ಬೇರೆಲ್ಲಾ ಸಂಗಗಳನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿ. ಆತ್ಮವೇ ಪತಿತವಾಗಿದೆ, ಅದು ಈಗ
ಪವಿತ್ರವಾಗಬೇಕಾಗಿದೆ. ಈ ತಿಳುವಳಿಕೆಯನ್ನು ತಂದೆಯೇ ಕೊಡುತ್ತಾರೆ ಏಕೆಂದರೆ ತಂದೆಯು ಪ್ರಿನ್ಸಿಪಲ್,
ಡಾಕ್ಟರ್, ಬ್ಯಾರಿಸ್ಟರ್, ಅಕ್ಕ ಸಾಲಿಗ ಎಲ್ಲವೂ ಆಗಿದ್ದಾರೆ. ಈ ಹೆಸರುಗಳು
ಸತ್ಯಯುಗದಲ್ಲಿರುವುದಿಲ್ಲ. ಅಲ್ಲಿ ಈ ವಿದ್ಯೆಯೂ ಇರುವುದಿಲ್ಲ. ಇಲ್ಲಿ ನೌಕರಿ ಮಾಡುವುದಕ್ಕಾಗಿ
ಓದುತ್ತಾರೆ, ಹಿಂದಿನ ಕಾಲದಲ್ಲಿ ಸ್ತ್ರೀಯರು ಇಷ್ಟೊಂದು ಓದುತ್ತಿರಲಿಲ್ಲ, ಇದೆಲ್ಲವನ್ನೂ
ನಂತರದಲ್ಲಿ ಕಲಿತಿದ್ದಾರೆ. ಪತಿಯು ಮರಣ ಹೊಂದಿದರೆ ಯಾರು ಸಂಭಾಲನೆ ಮಾಡುವರು? ಆದ್ದರಿಂದ
ಸ್ತ್ರೀಯರೂ ಸಹ ಎಲ್ಲವನ್ನೂ ಕಲಿಯುತ್ತಿರುತ್ತಾರೆ. ಸತ್ಯಯುಗದಲ್ಲಂತೂ ಚಿಂತನೆ ಮಾಡಲು ಇಂತಹ
ಮಾತುಗಳೇ ಇರುವುದಿಲ್ಲ. ಇಲ್ಲಿ ಮನುಷ್ಯರು ಇಂತಹ ಸಮಯಕ್ಕಾಗಿ ಹಣ ಕೂಡಿಡುತ್ತಾರೆ. ಸತ್ಯಯುಗದಲ್ಲಿ
ಚಿಂತೆ ಮಾಡುವ ಮಾತೇ ಇರುವುದಿಲ್ಲ. ತಂದೆಯು ನೀವು ಮಕ್ಕಳನ್ನು ಎಷ್ಟು ಧನವಂತರನ್ನಾಗಿ ಮಾಡಿ
ಬಿಡುತ್ತಾರೆ! ಸ್ವರ್ಗದಲ್ಲಿ ಬಹಳ ಖಜಾನೆಗಳಿರುತ್ತವೆ, ವಜ್ರ-ವೈಡೂರ್ಯಗಳ ಗಣಿಗಳೆಲ್ಲವೂ
ಸಂಪನ್ನವಾಗಿರುತ್ತದೆ. ಇಲ್ಲಿ ಬಂಜರು ಭೂಮಿಯಾಗಿರುವ ಕಾರಣ ಆ ಸಾರವಿಲ್ಲ. ಅಲ್ಲಿಯ ಹೂಗಳು ಮತ್ತು
ಇಲ್ಲಿನ ಹೂಗಳಲ್ಲಿ ರಾತ್ರಿ-ಹಗಲಿನ ಅಂತರವಿದೆ. ಇಲ್ಲಂತೂ ಎಲ್ಲಾ ಪದಾರ್ಥಗಳಿಂದ ಸಾರವೇ ಹೊರಟು
ಹೋಗಿದೆ. ಭಲೆ ಅಮೇರಿಕಾ ಮೊದಲಾದ ಕಡೆಗಳಿಂದ ಎಷ್ಟಾದರೂ ಬೀಜಗಳನ್ನು ತರಲಿ ಆದರೆ ಸಾರವೇ ಹೊರಟು
ಹೋಗುತ್ತದೆ. ಧರಣಿಯೇ ಈ ರೀತಿ ಇದೆ, ಇದರಲ್ಲಿ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಅಲ್ಲಂತೂ ಪ್ರತೀ
ವಸ್ತು ಸತೋಪ್ರಧಾನವಾಗಿರುತ್ತದೆ, ಪ್ರಕೃತಿಯೂ ಸತೋಪ್ರಧಾನವಾಗಿರುವುದರಿಂದ ಎಲ್ಲವೂ
ಸತೋಪ್ರಧಾನವಾಗಿರುತ್ತದೆ. ಇಲ್ಲಾದರೆ ಎಲ್ಲಾ ವಸ್ತುಗಳು ತಮೋಪ್ರಧಾನವಾಗಿವೆ. ಯಾವುದೇ
ವಸ್ತುವಿನಲ್ಲಿ ಸಾರವಿಲ್ಲ, ಈ ಅಂತರವನ್ನೂ ಸಹ ನೀವು ತಿಳಿದುಕೊಳ್ಳುತ್ತೀರಿ. ಯಾವಾಗ ಸತೋಪ್ರಧಾನ
ವಸ್ತುಗಳನ್ನು ನೋಡುತ್ತೀರೋ ಅದನ್ನು ಧ್ಯಾನದಲ್ಲಿ ಹೋದಾಗಲೇ ನೋಡುತ್ತೀರಿ. ಅಲ್ಲಿನ ಹೂ-ಹಣ್ಣು
ಇತ್ಯಾದಿಗಳು ಎಷ್ಟು ಸುಂದರವಾಗಿರುತ್ತವೆ! ಅಲ್ಲಿನ ದವಸ-ಧಾನ್ಯಗಳೆಲ್ಲವೂ ಸಹ ನಿಮಗೆ ಕಾಣುವ
ಸಾಧ್ಯತೆಯಿದೆ. ಬುದ್ಧಿಯಿಂದ ತಿಳಿದುಕೊಳ್ಳಬಹುದಾಗಿದೆ. ಅಲ್ಲಿನ ಪ್ರತಿಯೊಂದು ವಸ್ತುವಿನಲ್ಲಿ
ಎಷ್ಟೊಂದು ಶಕ್ತಿಯಿರುತ್ತದೆ. ಹೊಸ ಪ್ರಪಂಚವು ಯಾರದೇ ಬುದ್ಧಿಯಲ್ಲಿ ಬರುವುದೇ ಇಲ್ಲ. ಈ ಹಳೆಯ
ಪ್ರಪಂಚದ ಮಾತೇ ಕೇಳಬೇಡಿ! ಬಹಳ ಉದ್ದಗಲವಾಗಿ ಸುಳ್ಳು ಹೇಳುತ್ತಿರುತ್ತಾರೆ ಆದ್ದರಿಂದ ಮನುಷ್ಯರು
ಸಂಪೂರ್ಣ ಅಂಧಕಾರದಲ್ಲಿ ಮಲಗಿಬಿಟ್ಟಿದ್ದಾರೆ. ಇನ್ನು ಸ್ವಲ್ಪವೇ ಸಮಯವಿದೆ ಎಂದು ನೀವು ತಿಳಿಸಿದಾಗ
ನಿಮ್ಮ ಮಾತಿಗೆ ಕೆಲವರು ಹಾಸ್ಯ ಮಾಡುತ್ತಾರೆ. ಯಾರು ತಮ್ಮನ್ನು ಬ್ರಾಹ್ಮಣರೆಂದು ತಿಳಿಯುವರೋ ಅವರೇ
ಸತ್ಯತೆಯನ್ನು ಅರಿತುಕೊಳ್ಳುತ್ತಾರೆ. ಇದು ಹೊಸ ಭಾಷೆ, ಆತ್ಮಿಕ ವಿದ್ಯೆಯಲ್ಲವೆ. ಎಲ್ಲಿಯವರೆಗೆ
ಆತ್ಮಿಕ ತಂದೆಯು ಬರುವುದಿಲ್ಲವೋ ಅಲ್ಲಿಯವರೆಗೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆತ್ಮಿಕ
ತಂದೆಯನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅವರಂತೂ ಹೋಗಿ ಯೋಗಗಳನ್ನು ಕಲಿಸುತ್ತಾರೆ ಆದರೆ
ಅವರಿಗೆ ಕಲಿಸಿದವರಾದರೂ ಯಾರು? ಆತ್ಮಿಕ ತಂದೆಯು ಕಲಿಸಿದರು ಎಂದಂತೂ ಹೇಳುವುದಿಲ್ಲ ಏಕೆಂದರೆ
ತಂದೆಯು ಆತ್ಮಿಕ ಮಕ್ಕಳಿಗೇ ಕಲಿಸುತ್ತಾರೆ. ನೀವು ಸಂಗಮಯುಗೀ ಬ್ರಾಹ್ಮಣರೇ ತಿಳಿದುಕೊಳ್ಳುತ್ತೀರಿ.
ಯಾರು ಆದಿಸನಾತನ ದೇವಿ-ದೇವತಾ ಧರ್ಮದವರಾಗಿರುವರೋ ಅವರೇ ಬ್ರಾಹ್ಮಣರಾಗುವರು. ನೀವು ಬ್ರಾಹ್ಮಣರು
ಎಷ್ಟು ಕಡಿಮೆ ಸಂಖ್ಯೆಯಿದ್ದೀರಿ, ಪ್ರಪಂಚದಲ್ಲಂತೂ ವಿಭಿನ್ನ ಜಾತಿಗಳಿವೆ. ಒಂದು ಪುಸ್ತಕವಿದೆ
ಅದರಿಂದ ಅರ್ಥವಾಗುತ್ತದೆ - ಪ್ರಪಂಚದಲ್ಲಿ ಎಷ್ಟು ಧರ್ಮಗಳು, ಎಷ್ಟೊಂದು ಭಾಷೆಗಳಿವೆ! ಆದರೆ ನಿಮಗೆ
ತಿಳಿದಿದೆ, ಕೊನೆಗೆ ಇವೆಲ್ಲವೂ ಉಳಿಯುವುದಿಲ್ಲ. ಸತ್ಯಯುಗದಲ್ಲಿ ಒಂದು ಧರ್ಮ, ಒಂದೇ ಭಾಷೆಯಿತ್ತು.
ನೀವು ಸೃಷ್ಟಿಚಕ್ರವನ್ನು ಅರಿತಿದ್ದೀರಿ ಅಂದಮೇಲೆ ಭಾಷೆಗಳನ್ನು ಅರಿತುಕೊಳ್ಳಬಲ್ಲಿರಿ - ಇವೆಲ್ಲವೂ
ಕೊನೆಗೆ ಇರುವುದಿಲ್ಲ. ಎಲ್ಲಾ ಆತ್ಮಗಳು ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಈ ಸೃಷ್ಟಿಚಕ್ರದ
ಜ್ಞಾನವು ಈಗ ನೀವು ಮಕ್ಕಳಿಗೆ ಸಿಕ್ಕಿದೆ. ನೀವು ಮನುಷ್ಯರಿಗೆ ತಿಳಿಸುತ್ತೀರಿ ಆದರೂ ಸಹ ಅವರು
ತಿಳಿದುಕೊಳ್ಳುವುದಿಲ್ಲ. ಕೆಲವರು ದೊಡ್ಡ ವ್ಯಕ್ತಿಗಳಿಂದ ಏತಕ್ಕೆ ಉದ್ಘಾಟನೆ ಮಾಡಿಸುತ್ತಾರೆಂದರೆ
ಅವರು ಪ್ರಸಿದ್ಧರಾಗಿರುತ್ತಾರೆ ಆದ್ದರಿಂದ ಓಹೋ! ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಯವರು
ಉದ್ಘಾಟನೆ ಮಾಡಿದರೆಂದು ಸುದ್ಧಿಯು ಹರಡುವುದು. ಈ ತಂದೆಯು ಹೋದರೆ ಪರಮಪಿತ ಪರಮಾತ್ಮನು ಉದ್ಘಾಟನೆ
ಮಾಡಿದರೆಂದು ಮನುಷ್ಯರಿಗೆ ಅರ್ಥವಾಗುವುದಿಲ್ಲ, ಒಪ್ಪುವುದೂ ಇಲ್ಲ. ಯಾರಾದರೂ ದೊಡ್ಡ ವ್ಯಕ್ತಿಗಳು
ಕಮೀಷನರ್ ಮೊದಲಾದವರು ಬಂದರೆ ಅವರ ಹಿಂದೆ ಅನೇಕರು ಓಡಿ ಬರುವರು ಆದರೆ ಇವರ (ಬ್ರಹ್ಮಾ) ಹಿಂದೆ ಯಾರೂ
ಓಡಿಬರುವುದಿಲ್ಲ. ನೀವು ಬ್ರಾಹ್ಮಣ ಮಕ್ಕಳು ಕೆಲವರೇ ಇದ್ದೀರಿ. ಯಾವಾಗ ನಿಮ್ಮ ಸಂಖ್ಯೆಯು
ಹೆಚ್ಚುವುದೋ ಆಗ ಎಲ್ಲರಿಗೆ ಅರ್ಥವಾಗುತ್ತದೆ. ಈಗ ಒಂದುವೇಳೆ ಅರ್ಥವಾಗಿದ್ದೇ ಆದರೆ ತಂದೆಯ ಬಳಿ
ಓಡುವರು. ಒಬ್ಬರು ಇಲ್ಲಿನ ಕನ್ಯೆಗೆ ಹೇಳಿದ್ದರು, ಯಾರು ನಿಮಗೆ ಇದನ್ನು ಕಲಿಸಿದರೋ ನಾವು ಡೈರೆಕ್ಟ್
ಅವರ ಬಳಿ ಏಕೆ ಹೋಗಬಾರದು ಎಂದು. ಆದರೆ ಎಲ್ಲಿಯವರೆಗೆ ಸೂಜಿಯ ಮೇಲೆ ತುಕ್ಕು ಇರುವುದೋ ಅಲ್ಲಿಯವರೆಗೆ
ಅಯಸ್ಕಾಂತವು ಹೇಗೆ ಆಕರ್ಷಿಸುತ್ತದೆ? ಯಾವಾಗ ತುಕ್ಕು ಪೂರ್ಣ ರೀತಿಯಲ್ಲಿ ಬಿಟ್ಟು ಹೋಗುವುದೋ ಆಗ
ಅಯಸ್ಕಾಂತವು ಸೆಳೆಯುತ್ತದೆ. ಸೂಜಿಯ ಒಂದು ಮೂಲೆಯು ತುಕ್ಕು ಏರಿದ್ದರೂ ಸಹ ಅಷ್ಟೊಂದು
ಸೆಳೆಯುವುದಿಲ್ಲ. ತುಕ್ಕು ಎಲ್ಲವೂ ಅಂತಿಮದಲ್ಲಿಯೇ ಬಿಟ್ಟು ಹೋಗುವುದು. ಯಾವಾಗ ಇಷ್ಟು
ಶ್ರೇಷ್ಠರಾಗುವಿರೋ ಆಗ ತಂದೆಯ ಜೊತೆ ಹಿಂತಿರುಗಿ ಹೋಗುತ್ತೀರಿ. ಈಗಂತೂ ಚಿಂತೆಯಿದೆ - ನಾವು
ತಮೋಪ್ರಧಾನರಾಗಿದ್ದೇವೆ, ತುಕ್ಕು ಹಿಡಿದಿದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ತುಕ್ಕು
ಕಳೆಯುತ್ತಾ ಹೋಗುವುದು. ನಿಧಾನ-ನಿಧಾನವಾಗಿ ತುಕ್ಕು ಬಿಟ್ಟು ಹೋಗುವುದು. ತುಕ್ಕು ಹಿಡಿಯುವುದೂ ಸಹ
ನಿಧಾನ-ನಿಧಾನವಾಗಿಯೇ ಅಲ್ಲವೆ ಅಂದಮೇಲೆ ಬಿಡುವುದೂ ನಿಧಾನವಾಗಿಯೇ. ಹೇಗೆ ತುಕ್ಕು ಏರಿದೆಯೋ ಅದೇ
ರೀತಿ ಸ್ವಚ್ಛವಾಗಲೂಬೇಕಾಗಿದೆ. ಅಂದಮೇಲೆ ಅದಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ.
ನೆನಪಿನಿಂದ ಕೆಲವರದು ಹೆಚ್ಚು ಬಿಟ್ಟು ಹೋಗಿದೆ. ಇನ್ನು ಕೆಲವರದು ಕಡಿಮೆ. ತುಕ್ಕು ಎಷ್ಟು
ಕಳೆಯುತ್ತಾ ಹೋಗುವುದೋ ಅಷ್ಟು ಅವರು ಅನ್ಯರಿಗೆ ತಿಳಿಸುವುದರಲ್ಲಿ ಹೆಚ್ಚು ಆಕರ್ಷಿಸುತ್ತಾರೆ. ಇವು
ಬಹಳ ಗುಹ್ಯ ಮಾತುಗಳಾಗಿವೆ. ಮಂಧ ಬುದ್ಧಿಯವರು ಈ ಮಾತುಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.
ನಿಮಗೆ ತಿಳಿದಿದೆ - ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ತಿಳಿಸಿಕೊಡುವುದಕ್ಕಾಗಿಯೂ
ದಿನ-ಪ್ರತಿದಿನ ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ಮೊದಲು ಪ್ರದರ್ಶನಿಗಳು, ಮ್ಯೂಸಿಯಂ
ಇತ್ಯಾದಿಗಳೆಲ್ಲವೂ ಆಗುತ್ತವೆ ಎಂಬುದು ತಿಳಿದಿರಲಿಲ್ಲ. ಮುಂದೆ ಇನ್ನೂ ಬಹಳಷ್ಟು ಹೊಸ ಪದ್ಧತಿಗಳು
ಬರಬಹುದು. ಇನ್ನೂ ಸಮಯವಿದೆ, ಸ್ಥಾಪನೆ ಆಗಬೇಕಾಗಿದೆ ಆದ್ದರಿಂದ ಇದರಲ್ಲಿ ಹೃದಯಾಘಾತವಾಗಬಾರದು.
ಕರ್ಮೇಂದ್ರಿಯಗಳನ್ನು ವಶ ಮಾಡಿಕೊಳ್ಳಲಿಲ್ಲವೆಂದರೆ ಕೆಳಗೆ ಬೀಳುತ್ತಾರೆ. ವಿಕಾರದಲ್ಲಿ ಹೋದರೆ
ಮತ್ತೆ ಸೂಜಿಯ ಮೇಲೆ ಬಹಳ ತುಕ್ಕು ಏರಿ ಬಿಡುವುದು. ವಿಕಾರದಿಂದಲೇ ಹೆಚ್ಚು ತುಕ್ಕು ಹಿಡಿಯುತ್ತಾ
ಹೋಗುತ್ತದೆ. ಸತ್ಯ-ತ್ರೇತಾಯುಗದಲ್ಲಿ ಬಹಳ ಕಡಿಮೆ, ನಂತರ ಅರ್ಧ ಕಲ್ಪದಲ್ಲಿ ಬೇಗ ಬೇಗನೆ ತುಕ್ಕು
ಏರುತ್ತಾ ಹೋಗುತ್ತದೆ, ಕೆಳಗಿಳಿಯತೊಡಗುತ್ತೀರಿ ಆದ್ದರಿಂದ ವಿಕಾರಿಗಳು, ನಿರ್ವಿಕಾರಿಗಳೆಂದು
ಗಾಯನವಿದೆ. ನಿರ್ವಿಕಾರಿ ದೇವತೆಗಳ ನಿದರ್ಶನವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ದೇವಿ-ದೇವತಾ
ಧರ್ಮವು ಪ್ರಾಯಲೋಪವಾಗಿ ಬಿಟ್ಟಿದೆ, ಅದರ ನಿದರ್ಶನಗಳಿವೆಯಲ್ಲವೆ. ಎಲ್ಲದಕ್ಕಿಂತ ಒಳ್ಳೆಯ
ಸಾಕ್ಷ್ಯಾಧಾರ ಈ ಲಕ್ಷ್ಮೀ-ನಾರಾಯಣರ ಚಿತ್ರವಾಗಿದೆ. ನೀವು ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು
ತೆಗೆದುಕೊಂಡು ಮೆರವಣಿಗೆ ಮಾಡಬಹುದು ಏಕೆಂದರೆ ನೀವು ಈ ರೀತಿಯಾಗುತ್ತೀರಲ್ಲವೆ. ರಾವಣ ರಾಜ್ಯದ
ವಿನಾಶ, ರಾಮ ರಾಜ್ಯದ ಸ್ಥಾಪನೆಯಾಗುತ್ತದೆ. ಇದು ರಾಮ ರಾಜ್ಯ, ಅದು ರಾವಣ ರಾಜ್ಯ ಮಧ್ಯದಲ್ಲಿ
ಸಂಗಮವಾಗಿದೆ. ಬಹಳಷ್ಟು ಯುಕ್ತಿಗಳಿವೆ. ಹೇಗೆ ವೈದ್ಯರ ಬುದ್ಧಿಯಲ್ಲಿ ಎಷ್ಟೊಂದು ಔಷಧಿಗಳ
ನೆನಪಿರುತ್ತದೆ ಹಾಗೆಯೇ ವಕೀಲರ ಬುದ್ಧಿಯಲ್ಲಿ ಅನೇಕರ ವಿಚಾರಗಳಿರುತ್ತವೆ. ಈ ಅನೇಕ ವಿಷಯಗಳನ್ನು
ಸೇರಿಸಿದರೆ ಒಂದು ಒಳ್ಳೆಯ ಪುಸ್ತಕವಾಗುತ್ತದೆ. ನೀವು ಭಾಷಣ ಮಾಡಲು ಹೋದಾಗ ಇವೆಲ್ಲಾ ಮಾತುಗಳನ್ನು
ನೆನಪಿಟ್ಟುಕೊಳ್ಳಿ. ಸೂಕ್ಷ್ಮ ಬುದ್ಧಿಯವರು ಬಹು ಬೇಗನೆ ನೋಡುತ್ತಾರೆ, ಮೊದಲು ನಾವು ಹೀಗೀಗೆ
ತಿಳಿಸಬೇಕೆಂದು ಬರೆಯಿರಿ, ಭಾಷಣ ಮಾಡಿದ ನಂತರವೂ ನೆನಪಿಗೆ ಬರುತ್ತದೆಯಲ್ಲವೆ - ಹೀಗೆ ತಿಳಿಸಿದ್ದರೆ
ಬಹಳ ಚೆನ್ನಾಗಿರುತ್ತಿತ್ತು ಎಂದು. ಅಂದಾಗ ಈ ಮಾತುಗಳನ್ನು ಅನ್ಯರಿಗೆ ತಿಳಿಸಿದಾಗಲೇ ಬುದ್ಧಿಯಲ್ಲಿ
ಕುಳಿತುಕೊಳ್ಳುತ್ತದೆ ಆದ್ದರಿಂದ ಅನೇಕ ವಿಷಯಗಳಿಂದ ಕೂಡಿದ ಪಟ್ಟಿಯು ನಿಮ್ಮ ಬಳಿಯಿರಲಿ. ಒಂದು
ವಿಷಯವನ್ನು ತೆಗೆದುಕೊಂಡು ಅದರ ಬಗ್ಗೆ ತನ್ನೊಳಗೇ ಭಾಷಣ ಮಾಡಿಕೊಳ್ಳಿ ಅಥವಾ ಬರೆಯಿರಿ. ನಂತರ ನೋಡಿ,
ಎಷ್ಟು ವಿಚಾರಗಳನ್ನು ಬರೆದಿದ್ದೇನೆ? ಇದರಲ್ಲಿ ಎಷ್ಟು ತಲೆ ಕೆಡಿಸಿಕೊಳ್ಳುತ್ತೀರೋ ಅಷ್ಟು
ಒಳ್ಳೆಯದು. ತಂದೆಗಂತೂ ತಿಳಿದಿದೆಯಲ್ಲವೆ - ಇವರು ಒಳ್ಳೆಯ ಸರ್ಜನ್ ಆಗಿದ್ದಾರೆ, ಇವರ ಬುದ್ಧಿಯಲ್ಲಿ
ಬಹಳಷ್ಟು ವಿಚಾರಗಳಿವೆ ಎಂದು. ಯಾವಾಗ ಸಂಪನ್ನರಾಗಿ ಬಿಡುವಿರೋ ಆಗ ಸೇವೆಯಿಲ್ಲದೆ ನಿಮಗೆ
ಆನಂದವಿರುವುದಿಲ್ಲ.
ನೀವು ಪ್ರದರ್ಶನಿಯನ್ನು
ಇಡುತ್ತೀರಿ, ಕೆಲವೊಂದು ಕಡೆ ಇಬ್ಬರು, ನಾಲ್ಕು ಮಂದಿ, ಇನ್ನೂ ಕೆಲವೊಂದು ಕಡೆ 6-8 ಜನ ಬಂದು ಪಕ್ಕಾ
ಆಗುತ್ತಾರೆ. ಕೆಲವೊಂದೆಡೆ ಒಬ್ಬರೂ ಬರುವುದಿಲ್ಲ, ಸಾವಿರಾರು ಬಂದು ನೋಡಿದರು ಆದರೆ ಬಹಳ ವಿರಳ
ಯಥಾರ್ಥವಾಗಿ ತಿಳಿದುಕೊಳ್ಳುವರು. ಈಗ ದೊಡ್ಡ-ದೊಡ್ಡ ಚಿತ್ರಗಳನ್ನು ಮಾಡಿಸುತ್ತಾ ಇರುತ್ತೀರಿ. ನೀವು
ಬುದ್ಧಿವಂತರಾಗುತ್ತಾ ಹೋಗುತ್ತೀರಿ. ದೊಡ್ಡ-ದೊಡ್ಡ ವ್ಯಕ್ತಿಗಳದು ಯಾವ ಗತಿಯಾಗಿದೆ ಎಂಬುದನ್ನೂ ಸಹ
ನೀವು ನೋಡುತ್ತೀರಿ. ತಂದೆಯು ತಿಳಿಸಿದ್ದಾರೆ - ಈ ಜ್ಞಾನವನ್ನು ಯಾರಿಗೆ ಕೊಡಬೇಕೆಂದು ಪರಿಶೀಲನೆ
ಮಾಡಿ. ಯಾರು ನನ್ನ ಭಕ್ತರಾಗಿದ್ದಾರೆ ಎಂದು ನಾಡಿಯನ್ನು ನೋಡಿ. ಗೀತೆಯನ್ನು ಓದುವವರಿಗೆ ಮುಖ್ಯವಾಗಿ
ಇದೊಂದೇ ಮಾತನ್ನು ತಿಳಿಸಿ – ಶ್ರೇಷ್ಠಾತಿ ಶ್ರೇಷ್ಠನಿಗೇ ಭಗವಂತನೆಂದು ಹೇಳಲಾಗುತ್ತದೆ. ಅವರು
ನಿರಾಕಾರನಾಗಿದ್ದಾರೆ, ಯಾವುದೇ ದೇಹಧಾರಿ ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ನೀವು
ಮಕ್ಕಳಿಗೆ ಈಗ ಸಂಪೂರ್ಣ ತಿಳುವಳಿಕೆ ಬಂದಿದೆ. ಸನ್ಯಾಸಿಗಳೂ ಸಹ ಗೃಹಸ್ಥದ ಸನ್ಯಾಸ ಮಾಡಿ ಹೊರಟು
ಹೋಗುತ್ತಾರೆ. ಕೆಲವು ಬ್ರಹ್ಮಚಾರಿಗಳೇ ಹೊರಟು ಹೋಗುತ್ತಾರೆ ಮತ್ತೆ ಇನ್ನೊಂದು ಜನ್ಮದಲ್ಲಿ ಇದೇ
ರೀತಿಯಾಗುತ್ತದೆ. ಜನ್ಮವನ್ನಂತೂ ಅವಶ್ಯವಾಗಿ ತಾಯಿಯ ಗರ್ಭದಿಂದಲೇ ತೆಗೆದುಕೊಳ್ಳುತ್ತಾರೆ.
ಎಲ್ಲಿಯವರೆಗೆ ವಿವಾಹ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಬಂಧನ ಮುಕ್ತರಾಗಿರುತ್ತಾರೆ.
ಎಷ್ಟೊಂದು ಸಂಬಂಧಿ ಮೊದಲಾದವರು ನೆನಪಿಗೆ ಬರುವುದಿಲ್ಲ, ವಿವಾಹದ ನಂತರ ಸಂಬಂಧಗಳು ನೆನಪಿಗೆ
ಬರುತ್ತವೆ. ಬೇಗನೆ ಬಂಧನ ಮುಕ್ತರಾಗುವುದಿಲ್ಲ, ಸಮಯ ಹಿಡಿಸುತ್ತದೆ. ತಮ್ಮ ಜೀವನದ ಕಥೆಯಂತೂ
ಎಲ್ಲರಿಗೂ ತಿಳಿದಿರುತ್ತದೆ. ಸನ್ಯಾಸಿಗಳೂ ಸಹ ತಿಳಿದುಕೊಂಡಿರುತ್ತಾರೆ - ಮೊದಲು ನಾವು
ಗೃಹಸ್ಥಿಗಳಾಗಿದ್ದೆವು ನಂತರ ಸನ್ಯಾಸ ಮಾಡಿದೆವು. ನೀವು ಮಕ್ಕಳದು ದೊಡ್ಡ ಸನ್ಯಾಸವಾಗಿದೆ
ಆದ್ದರಿಂದ ಪರಿಶ್ರಮವಾಗುತ್ತದೆ. ಆ ಸನ್ಯಾಸಿಗಳು ವಿಭೂತಿಯನ್ನು ಹಚ್ಚಿ ಕೂದಲನ್ನು ಬಿಟ್ಟು ವೇಷ
ಬದಲಾಯಿಸುತ್ತಾರೆ. ನೀವಂತೂ ಹೀಗೆ ಮಾಡುವ ಅವಶ್ಯಕತೆಯಿಲ್ಲ. ಇಲ್ಲಂತೂ ವಸ್ತ್ರಗಳನ್ನು ಬದಲಾಯಿಸುವ
ಮಾತೂ ಇಲ್ಲ. ನೀವು ಬಿಳಿಯ ವಸ್ತ್ರಗಳನ್ನು ಧರಿಸದಿದ್ದರೂ ಪರವಾಗಿಲ್ಲ. ಇದಂತೂ ಬುದ್ಧಿಯ
ಜ್ಞಾನವಾಗಿದೆ - ನಾವಾತ್ಮಗಳಾಗಿದ್ದೇವೆ, ತಂದೆಯನ್ನು ನೆನಪು ಮಾಡಬೇಕಾಗಿದೆ ಇದರಿಂದಲೇ ತುಕ್ಕು
ಕಳೆಯುವುದು ಮತ್ತು ನಾವು ಸತೋಪ್ರಧಾನರಾಗಿ ಬಿಡುತ್ತೇವೆ. ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ.
ಕೆಲವರು ಯೋಗಬಲದಿಂದ ಪಾವನರಾಗಿ ಹೋಗುತ್ತಾರೆ, ಕೆಲವರು ಶಿಕ್ಷೆಯನ್ನನುಭವಿಸಿ ಹೋಗುತ್ತಾರೆ. ನೀವು
ಮಕ್ಕಳಿಗೆ ತುಕ್ಕನ್ನು ಇಳಿಸಿಕೊಳ್ಳುವುದರಲ್ಲಿಯೇ ಪರಿಶ್ರಮ ಪಡಬೇಕಾಗುತ್ತದೆ ಆದ್ದರಿಂದ ಇದಕ್ಕೂ
ಯೋಗಾಗ್ನಿಯೆಂದು ಹೇಳುತ್ತಾರೆ. ಈ ಯೋಗಾಗ್ನಿಯಿಂದ ಪಾಪಗಳು ಭಸ್ಮವಾಗುತ್ತವೆ, ನೀವು ಪವಿತ್ರರಾಗಿ
ಬಿಡುತ್ತೀರಿ. ಕಾಮ ಚಿತೆಗೂ ಅಗ್ನಿಯೆಂದು ಹೇಳುತ್ತಾರೆ. ಕಾಮಾಗ್ನಿಯಲ್ಲಿ ಸುಟ್ಟು ಕಪ್ಪಾಗಿ
ಬಿಟ್ಟಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸುಂದರರಾಗಿ. ಈ ಮಾತುಗಳು ನೀವು
ಬ್ರಾಹ್ಮಣರ ವಿನಃ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಈ ಮಾತುಗಳು ಭಿನ್ನವಾಗಿವೆ.
ಇವರಂತೂ ಶಾಸ್ತ್ರಗಳನ್ನೂ ಒಪ್ಪುವುದಿಲ್ಲ, ನಾಸ್ತಿಕರಾಗಿ ಬಿಟ್ಟಿದ್ದಾರೆ ಎಂದು ನಿಮ್ಮನ್ನು ನೋಡಿ
ಕೆಲವರು ಹೇಳುತ್ತಾರೆ - ಅವರಿಗೆ ತಿಳಿಸಿ, ಶಾಸ್ತ್ರಗಳನ್ನಂತೂ ನಾವು ಓದುತ್ತಿದ್ದೆವು, ನಂತರ
ತಂದೆಯು ಜ್ಞಾನ ಕೊಟ್ಟಿದ್ದಾರೆ. ಜ್ಞಾನದಿಂದ ಸದ್ಗತಿಯಾಗುತ್ತದೆ. ಭಗವಾನುವಾಚ -
ವೇದ-ಉಪನಿಷತ್ತುಗಳನ್ನು ಓದುವುದರಿಂದ, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುವುದರಿಂದ ಯಾರೂ ನನ್ನನ್ನು
ಪ್ರಾಪ್ತಿ ಮಾಡಿಕೊಳ್ಳುವುದಿಲ್ಲ. ನನ್ನ ಮೂಲಕವೇ ನನ್ನನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯ.
ತಂದೆಯೇ ಬಂದು ಯೋಗ್ಯರನ್ನಾಗಿ ಮಾಡುತ್ತಾರೆ. ಆತ್ಮದಲ್ಲಿ ತುಕ್ಕು ಏರಿದಾಗ ಬಂದು ನಮ್ಮನ್ನು ಪಾವನ
ಮಾಡಿ ಎಂದು ತಂದೆಯನ್ನು ಕರೆಯುತ್ತೀರಿ. ಯಾವ ಆತ್ಮಗಳು ತಮೋಪ್ರಧಾನರಾಗಿದ್ದೀರೋ ಅವರೇ ಈಗ
ಸತೋಪ್ರಧಾನರಾಗಬೇಕಾಗಿದೆ. ತಮೋಪ್ರಧಾನರಿಂದ ತಮೋ, ರಜೋ, ಸತೋ ಮತ್ತೆ ಸತೋಪ್ರಧಾನರಾಗಬೇಕಾಗಿದೆ.
ಒಂದುವೇಳೆ ಮಧ್ಯದಲ್ಲಿ ಗಡಿ ಬಿಡಿಯಾಯಿತೆಂದರೆ ತುಕ್ಕು ಏರುತ್ತಾ ಹೋಗುವುದು.
ತಂದೆಯು ನಮ್ಮನ್ನು ಇಷ್ಟು
ಶ್ರೇಷ್ಠರನ್ನಾಗಿ ಮಾಡುತ್ತಾರೆ ಅಂದಮೇಲೆ ಆ ಖುಷಿಯಿರಬೇಕಲ್ಲವೆ. ಓದುವುದಕ್ಕಾಗಿ ಖುಷಿ-ಖುಷಿಯಿಂದ
ವಿದೇಶಕ್ಕೆ ಹೋಗುತ್ತಾರಲ್ಲವೆ. ನೀವೀಗ ಎಷ್ಟು ಬುದ್ಧಿವಂತರಾಗುತ್ತೀರಿ! ಕಲಿಯುಗದಲ್ಲಿ ಎಷ್ಟೊಂದು
ತಮೋಪ್ರಧಾನ, ಬುದ್ಧಿಹೀನರಾಗಿ ಬಿಡುತ್ತಾರೆ! ಎಷ್ಟಾದರೂ ಪ್ರೀತಿ ಮಾಡಿ, ಅಷ್ಟು ಇನ್ನೂ
ಎದುರಾಗುತ್ತಾರೆ. ನೀವು ಮಕ್ಕಳಿಗೆ ತಿಳಿದಿದೆ - ಈಗ ನಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಯಾರು
ಚೆನ್ನಾಗಿ ಓದುತ್ತಿರುವರೋ, ಯಾರು ನೆನಪಿನಲ್ಲಿರುವರೋ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ.
ಭಾರತದಿಂದಲೇ ಸಸಿಯು ನಾಟಿಯಾಗುತ್ತದೆ. ದಿನ-ಪ್ರತಿದಿನ ಪತ್ರಿಕೆ ಮೊದಲಾದುವುಗಳಿಂದ ನಿಮ್ಮ ಹೆಸರು
ಪ್ರಸಿದ್ಧವಾಗುತ್ತಾ ಹೋಗುವುದು. ವಾರ್ತಾ ಪತ್ರಿಕೆಗಳಂತೂ ಎಲ್ಲಾಕಡೆಯೂ ಹೋಗುತ್ತದೆ. ಅದೇ
ಪತ್ರಿಕೆಯವರು ಒಮ್ಮೆ ನೋಡಿದರೆ ಚೆನ್ನಾಗಿ ಹಾಕುವರು. ಇನ್ನೂ ಕೆಲವೊಮ್ಮೆ ಕೆಟ್ಟದಾಗಿ ಬರೆಯುವರು
ಏಕೆಂದರೆ ಅವರೂ ಸಹ ಹೇಳಿಕೆ-ಕೇಳಿಕೆಯ ಮಾತುಗಳಂತೆ ನಡೆಯುತ್ತಾರಲ್ಲವೆ. ಯಾರು ಏನು ತಿಳಿಸುವರೋ
ಅದನ್ನು ಬರೆದು ಬಿಡುತ್ತಾರೆ. ಹೀಗೆ ಹೇಳಿಕೆ-ಕೇಳಿಕೆಯಂತೆ ಬಹಳ ನಡೆಯುತ್ತಾರೆ ಅದಕ್ಕೆ ಪರಮತವೆಂದು
ಹೇಳಲಾಗುತ್ತದೆ. ಪರಮತವು ಆಸುರೀ ಮತವಾಯಿತು. ತಂದೆಯದು ಶ್ರೀಮತವಾಗಿದೆ. ಯಾರಾದರೂ ಉಲ್ಟಾ ಮಾತನ್ನು
ತಿಳಿಸಿದರೆ ಸಾಕು, ಇಲ್ಲಿಗೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಯಾರು ಬಹಳ ಸರ್ವೀಸಿನಲ್ಲಿರುವರೋ
ಅವರಿಗೆ ಎಲ್ಲವೂ ತಿಳಿದಿರುತ್ತದೆ. ಇಲ್ಲಿ ನೀವು ಏನೆಲ್ಲಾ ಸೇವೆ ಮಾಡುತ್ತೀರೋ ನಿಮ್ಮದು ಇದು
ನಂಬರ್ವನ್ ಸೇವೆಯಾಗಿದೆ. ಇಲ್ಲಿ ನೀವು ಸೇವೆ ಮಾಡುತ್ತೀರಿ, ಅಲ್ಲಿ ಫಲವು ಸಿಗುತ್ತದೆ.
ಕರ್ತವ್ಯವನ್ನಂತೂ ಇಲ್ಲಿ ತಂದೆಯ ಜೊತೆಯಲ್ಲಿಯೇ ಮಾಡುತ್ತೀರಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮರೂಪಿ
ಸೂಜಿಯಲ್ಲಿ ತುಕ್ಕು ಹಿಡಿದಿದೆ ಅದನ್ನು ಯೋಗಬಲದಿಂದ ಇಳಿಸಿಕೊಂಡು ಸತೋಪ್ರಧಾನರಾಗುವ ಪರಿಶ್ರಮ
ಪಡಬೇಕಾಗಿದೆ. ಎಂದೂ ಹೇಳಿಕೆ-ಕೇಳಿಕೆ ಮಾತುಗಳಂತೆ ನಡೆದು ವಿದ್ಯಾಭ್ಯಾಸವನ್ನು ಬಿಡಬಾರದು.
2. ಬುದ್ಧಿಯನ್ನು ಜ್ಞಾನ
ಬಿಂದುಗಳಿಂದ ಸಂಪನ್ನವಾಗಿಟ್ಟುಕೊಂಡು ಸರ್ವೀಸ್ ಮಾಡಬೇಕಾಗಿದೆ. ನಾಡಿ ನೋಡಿ ಜ್ಞಾನವನ್ನು
ತಿಳಿಸಬೇಕಾಗಿದೆ. ಬಹಳ ತೀಕ್ಷ್ಣ ಬುದ್ಧಿಯವರಾಗಬೇಕಾಗಿದೆ.
ವರದಾನ:
ಕಲಿಯುಗಿ
ಪ್ರಪಂಚದ ದುಃಖ ಅಶಾಂತಿಯ ನೋಟ ನೋಡುತ್ತಿದ್ದರೂ ಸದಾ ಸಾಕ್ಷಿ ಹಾಗೂ ಬೇಹದ್ದಿನ ವೈರಾಗಿ ಭವ.
ಈ ಕಲಿಯುಗಿ ಪ್ರಪಂಚದಲ್ಲಿ
ಏನೇ ಆದರೂ ಸಹ ತಮ್ಮದು ಸದಾ ಏರುವ ಕಲೆಯಾಗಿದೆ. ಜಗತ್ತಿನವರಿಗೆ ಹಾಹಾಕಾರ ಮತ್ತು ನಿಮಗೆ ಜೈ ಜೈಕಾರ.
ತಾವು ಯಾವುದೇ ಪರಿಸ್ಥಿತಿಯಲ್ಲಿ ಗಾಬರಿಯಾಗುವುದಿಲ್ಲ, ಏಕೆಂದರೆ ತಾವು ಮೊದಲಿನಿಂದಲೆ
ತಯಾರಾಗಿರುವಿರಿ. ಸಾಕ್ಷಿಯಾಗಿರುತ್ತಾ ಎಲ್ಲಾ ಪ್ರಕಾರದ ಆಟವನ್ನು ನೋಡುತ್ತಿರುವಿರಿ. ಕೆಲವರು
ಅಳುತ್ತಿರುತ್ತಾರೆ, ಕೆಲವರು ಕಿರುಚಾಡುತ್ತಿರುತ್ತಾರೆ, ಸಾಕ್ಷಿಯಾಗಿದ್ದು ನೋಡಿದಾಗ
ಸಂತೋಷವಾಗುತ್ತದೆ. ಯಾರು ಕಲಿಯುಗಿ ಪ್ರಪಂಚದ ದುಃಖ,ಅಶಾಂತಿಯ ದೃಶ್ಯಗಳನ್ನು ಸಾಕ್ಷಿಯಾಗಿದ್ದು
ನೊಡುತ್ತಾರೆ ಅವರು ಸಹಜವಾಗಿಯೇ ಬೇಹದ್ದಿನ ವೈರಾಗಿಗಳಾಗಿ ಬಿಡುತ್ತಾರೆ.
ಸ್ಲೋಗನ್:
ಎಂತಹದೇ
ಧರಣಿಯನ್ನು ತಯಾರು ಮಾಡಬೇಕಾದರೆ ವಾಣಿಯ ಜೊತೆ ವೃತ್ತಿಯಿಂದ ಸೇವೆ ಮಾಡಿ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಹೇಗೆ ಯಾವುದೇ
ಯಂತ್ರವನ್ನು ಸೆಟ್ ಮಾಡಲಾಗುತ್ತದೆ, ಒಂದು ಬಾರಿ ಸೆಟ್ ಮಾಡುವುದರಿಂದ ಸ್ವತಃವಾಗಿ
ನಡೆಯುತ್ತಿರುತ್ತದೆ. ಈ ರೀತಿಯಿಂದ ತಮ್ಮ ಸಂಪೂರ್ಣ ಸ್ಟೇಜ್ ಅಥವಾ ತಂದೆಯ ಸಮಾನ ಸ್ಥಿತಿಯ
ಸ್ಟೇಜ್ನ್ನು ಅಥವಾ ಕರ್ಮಾತೀತ ಸ್ಥಿತಿಯ ಸ್ಟೇಜ್ನ್ನು ಈ ರೀತಿ ಸೆಟ್ ಮಾಡಿ ಯಾವುದು ನಂತರ ಸಂಕಲ್ಪ,
ಶಬ್ದ ಅಥವಾ ಕರ್ಮ ಆ ಸೆಟಿಂಗ್ ಪ್ರಮಾಣ ಸ್ವತಃವಾಗಿ ನಡೆಯಲಿ.