23.04.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಭೋಲಾನಾಥ ಅತೀ ಪ್ರಿಯ ತಂದೆಯು ನಿಮ್ಮ ಸನ್ಮುಖದಲ್ಲಿ ಕುಳಿತಿದ್ದಾರೆ, ನೀವು ಪ್ರೀತಿಯಿಂದ ನೆನಪು
ಮಾಡಿ ಆಗ ಅವರ ಜೊತೆ ಲಗನ್ ಹೆಚ್ಚುತ್ತಾ ಹೋಗುವುದು, ವಿಘ್ನಗಳು ಸಮಾಪ್ತಿಯಾಗುವುದು”
ಪ್ರಶ್ನೆ:
ಬ್ರಾಹ್ಮಣ
ಮಕ್ಕಳಿಗೆ ಯಾವ ಮಾತು ಸದಾ ನೆನಪಿದ್ದಾಗ ಎಂದಿಗೂ ವಿಕರ್ಮವಾಗುವುದಿಲ್ಲ?
ಉತ್ತರ:
ಯಾವ ಕರ್ಮವನ್ನು
ನಾವು ಮಾಡುತ್ತೇವೆಯೋ ನಮ್ಮನ್ನು ನೋಡಿ ಅನ್ಯರೂ ಮಾಡುವರು, ಇದು ನೆನಪಿದ್ದಾಗ ವಿಕರ್ಮವಾಗುವುದಿಲ್ಲ.
ಒಂದುವೇಳೆ ಯಾರಾದರೂ ಬಚ್ಚಿಟ್ಟುಕೊಂಡು ಪಾಪ ಕರ್ಮ ಮಾಡಿದರೆ ಅವರು ಧರ್ಮರಾಜನಿಂದ ಮುಚ್ಚಿಡಲು
ಸಾಧ್ಯವಿಲ್ಲ. ಕೂಡಲೇ ಅದಕ್ಕೆ ಶಿಕ್ಷೆ ಸಿಗುವುದು. ಮುಂದೆ ಹೋದಂತೆ ನಿಯಮಗಳು ಇನ್ನೂ ಕಠಿಣವಾಗಿ
ಬರುವುದು. ಈ ಇಂದ್ರ ಸಭೆಯಲ್ಲಿ ಪತಿತರು ಯಾರೂ ಮುಚ್ಚಿಟ್ಟುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ.
ಗೀತೆ:
ಭೋಲಾನಾಥನಿಗಿಂತ
ಭಿನ್ನ ಯಾರೂ ಇಲ್ಲ............
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ತಿಳಿದಿದೆ - ಈಗ ಆತ್ಮಿಕ ತಂದೆಯು ನಮಗೆ ಈ ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಿದ್ದಾರೆ. ಅವರ ಹೆಸರೇ ಆಗಿದೆ - ಭೋಲಾನಾಥ. ತಂದೆಯು
ಬಹಳ ಮುಗ್ದರಾಗಿರುತ್ತಾರೆ, ಎಷ್ಟು ಕಷ್ಟವನ್ನು ಸಹನೆ ಮಾಡಿಯಾದರೂ ಮಕ್ಕಳಿಗೆ ಓದಿಸುತ್ತಾರೆ, ಪಾಲನೆ
ಮಾಡುತ್ತಾರೆ. ಮತ್ತೆ ಅವರು ದೊಡ್ಡವರಾದಾಗ ಎಲ್ಲವನ್ನೂ ಅವರಿಗೆ ಕೊಟ್ಟು ತಾನು ವಾನಪ್ರಸ್ಥವನ್ನು
ಸ್ವೀಕರಿಸುತ್ತಾರೆ. ನಾನು ನನ್ನ ಕರ್ತವ್ಯವನ್ನು ಪೂರ್ಣ ಮಾಡಿದೆನು, ಇನ್ನು ಮಕ್ಕಳಿಗೇ ಗೊತ್ತು
ಎಂದು ತಿಳಿದುಕೊಳ್ಳುತ್ತಾರೆ ಅಂದಮೇಲೆ ತಂದೆಯು ಮುಗ್ಧನಾದರಲ್ಲವೆ. ಇದನ್ನೂ ಸಹ ತಂದೆಯು ನಿಮಗೆ
ತಿಳಿಸುತ್ತಾರೆ ಏಕೆಂದರೆ ಅವರು ಭೋಲಾನಾಥನಾಗಿದ್ದಾರೆ. ಹೇಗೆ ಲೌಕಿಕ ತಂದೆಗೂ ಸಹ ಹೇಳುತ್ತಾರೆ -
ಅವರು ಎಷ್ಟು ಮುಗ್ಧರಾಗಿರುತ್ತಾರೆ. ಅವರಂತೂ ಹದ್ದಿನ ಭೋಲಾ ಆದರು ಆದರೆ ಇವರು ಬೇಹದ್ದಿನ
ಭೋಲಾನಾಥನಾಗಿದ್ದಾರೆ. ಪರಮಧಾಮದಿಂದ ಹಳೆಯ ಪ್ರಪಂಚ, ಹಳೆಯ ಶರೀರದಲ್ಲಿ ಬರುತ್ತಾರೆ ಆದ್ದರಿಂದ
ಮನುಷ್ಯರು ತಿಳಿದುಕೊಳ್ಳುತ್ತಾರೆ - ಹಳೆಯ ಪತಿತ ಶರೀರದಲ್ಲಿ ಹೇಗೆ ಬರಬಹುದು! ತಿಳಿದುಕೊಳ್ಳದ
ಕಾರಣ ಪಾವನ ಶರೀರದ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈ ಗೀತೆ, ವೇದ, ಶಾಸ್ತ್ರ
ಇತ್ಯಾದಿಗಳು ಕಲ್ಪದ ನಂತರವೂ ಆಗುತ್ತದೆ. ನೋಡಿ, ಶಿವ ತಂದೆಯು ಎಷ್ಟು ಮುಗ್ಧನಾಗಿದ್ದಾರೆ. ಅವರು
ಇಲ್ಲಿ ಬಂದಾಗಲೂ ಸಹ ಹೇಗೆ ತಂದೆಯು ಇಲ್ಲಿಯೇ ಕುಳಿತಿದ್ದಾರೆಂಬ ಅನುಭವವಾಗುತ್ತದೆ. ಈ ಸಾಕಾರ
ತಂದೆಯೂ ಸಹ ಭೋಲಾ ಅಲ್ಲವೆ. ಯಾವುದೇ ಶಲ್ಯವಾಗಲಿ, ತಿಲಕವಾಗಲಿ ಇಲ್ಲ. ಬಹಳ ಸಾಧಾರಣ
ತಂದೆಯಾಗಿದ್ದಾರೆ. ಮಕ್ಕಳಿಗೆ ತಿಳಿದಿದೆ - ಇಷ್ಟೆಲ್ಲಾ ಜ್ಞಾನವನ್ನು ಶಿವ ತಂದೆಯೇ ಕೊಡುತ್ತಾರೆ.
ಇದನ್ನು ತಿಳಿಸಲು ಮತ್ತ್ಯಾರಿಗೂ ಶಕ್ತಿಯಿಲ್ಲ. ದಿನ-ಪ್ರತಿ ದಿನ ಮಕ್ಕಳ ಲಗನ್ ಹೆಚ್ಚುತ್ತಾ
ಹೋಗುತ್ತದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪ್ರೀತಿ ಹೆಚ್ಚುವುದು. ಅತೀ ಪ್ರಿಯ
ತಂದೆಯಲ್ಲವೆ. ಈಗಷ್ಟೇ ಅಲ್ಲ, ಭಕ್ತಿ ಮಾರ್ಗದಲ್ಲಿಯೂ ನೀವು ಅತೀ ಪ್ರಿಯ ತಂದೆಯೆಂದು
ತಿಳಿದುಕೊಳ್ಳುತ್ತಿದ್ದಿರಿ. ಬಾಬಾ, ತಾವು ಬಂದರೆ ಮತ್ತೆಲ್ಲರಿಂದ ಪ್ರೀತಿಯನ್ನು ತೆಗೆದು
ತಾವೊಬ್ಬರೊಂದಿಗೆ ಪ್ರೀತಿಯನ್ನಿಡುವೆವು ಎಂದು ಹೇಳುತ್ತಾ ಬಂದಿರಿ. ಈಗಲೂ ಸಹ ನೀವು
ತಿಳಿದುಕೊಂಡಿದ್ದೀರಿ ಆದರೆ ಮಾಯೆಯು ತಂದೆಯ ಜೊತೆ ಅಷ್ಟೊಂದು ಪ್ರೀತಿಯನ್ನಿಡಲು ಬಿಡುವುದಿಲ್ಲ.
ಇವರು ನನ್ನನ್ನು ಬಿಟ್ಟು ತಂದೆಯನ್ನು ನೆನಪು ಮಾಡುವುದು ಮಾಯೆಗೆ ಇಷ್ಟವಿಲ್ಲ. ದೇಹಾಭಿಮಾನಿಯಾಗಿ
ನನ್ನನ್ನು ಪ್ರೀತಿ ಮಾಡಲಿ ಎಂದು ಅದು ಬಯಸುತ್ತದೆ ಆದ್ದರಿಂದಲೇ ಎಷ್ಟೊಂದು ವಿಘ್ನಗಳನ್ನು
ಹಾಕುತ್ತದೆ. ನೀವು ವಿಘ್ನಗಳನ್ನು ಪಾರು ಮಾಡಬೇಕಾಗಿದೆ. ಮಕ್ಕಳು ಸ್ವಲ್ಪವಾದರೂ ಪರಿಶ್ರಮ
ಪಡಬೇಕಲ್ಲವೆ. ಪುರುಷಾರ್ಥದಿಂದಲೇ ನೀವು ತಮ್ಮ ಪ್ರಾಲಬ್ಧವನ್ನು ಪಡೆಯುತ್ತೀರಿ. ಮಕ್ಕಳಿಗೆ
ಗೊತ್ತಿದೆ - ಶ್ರೇಷ್ಠ ಪದವಿಯನ್ನು ಪಡೆಯಲು ಎಷ್ಟೊಂದು ಪುರುಷಾರ್ಥ ಮಾಡಬೇಕಾಗಿದೆ! ಮೊದಲನೆಯದಾಗಿ
ವಿಕಾರಗಳ ದಾನ ಮಾಡಬೇಕು. ಎರಡನೆಯದಾಗಿ ತಂದೆಯಿಂದ ಯಾವ ಅವಿನಾಶಿ ಜ್ಞಾನ ರತ್ನಗಳ ಧನ ಸಿಗುತ್ತದೆಯೋ
ಅದನ್ನು ದಾನ ಮಾಡಬೇಕಾಗಿದೆ. ಆ ಅವಿನಾಶಿ ಧನದಿಂದಲೂ ನೀವು ಬಹಳ ಧನವಂತರಾಗುತ್ತೀರಿ. ಜ್ಞಾನವು
ಆದಾಯದ ಮೂಲವಾಗಿದೆ. ಅದು ಶಾಸ್ತ್ರಗಳ ಜ್ಞಾನ, ಇದು ಆಧ್ಯಾತ್ಮಿಕ ಜ್ಞಾನವಾಗಿದೆ. ಶಾಸ್ತ್ರ
ಇತ್ಯಾದಿಗಳನ್ನು ಓದಿ ಬಹಳ ಸಂಪಾದನೆ ಮಾಡುತ್ತಾರೆ. ಒಂದು ಕೋಣೆಯಲ್ಲಿ ಗ್ರಂಥ ಮೊದಲಾದುವುಗಳನ್ನು
ಇಟ್ಟುಕೊಂಡು ಸ್ವಲ್ಪ ಓದಿ ತಿಳಿಸಿದರೂ ಸಹ ಸಂಪಾದನೆಯಾಗಿ ಬಿಡುವುದು ಆದರೆ ಅದು ಯಥಾರ್ಥ
ಜ್ಞಾನವಲ್ಲ. ಯಥಾರ್ಥ ಜ್ಞಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಎಲ್ಲಿಯವರೆಗೆ ಈ ಜ್ಞಾನವು
ಸಿಗುವುದಿಲ್ಲವೋ ಅಲ್ಲಿಯವರೆಗೆ ಮನುಷ್ಯರ ಬುದ್ಧಿಯಲ್ಲಿ ಶಾಸ್ತ್ರಗಳ ಜ್ಞಾನವೇ ಇರುತ್ತದೆ. ನಿಮ್ಮ
ಮಾತನ್ನು ಕೇಳುವುದೇ ಇಲ್ಲ. ನೀವಿನ್ನೂ ಕೆಲವರೇ ಇದ್ದೀರಿ, ಇದಂತೂ 100% ನಿಶ್ಚಿತವಾಗಿದೆ. ಈ
ಆತ್ಮಿಕ ಜ್ಞಾನವನ್ನು ಮಕ್ಕಳು ಆತ್ಮಿಕ ತಂದೆಯಿಂದಲೇ ಪಡೆದಿದ್ದೀರಿ. ಜ್ಞಾನವು ಆದಾಯದ ಮೂಲವಾಗಿದೆ,
ಬಹಳಷ್ಟು ಧನ ಸಿಗುತ್ತದೆ. ಯೋಗದಿಂದ ಆರೋಗ್ಯದ ಸಂಪಾದನೆ ಅರ್ಥಾತ್ ನಿರೋಗಿ ಕಾಯವು ಸಿಗುತ್ತದೆ.
ಜ್ಞಾನದಿಂದ ಭಾಗ್ಯವು ಸಿಗುತ್ತದೆ. ಇವೆರಡೂ ಮುಖ್ಯ ಸಬ್ಜೆಕ್ಟ್ಗಳಾಗಿವೆ. ಆದರೂ ಸಹ ಇದನ್ನು ಕೆಲವರು
ಚೆನ್ನಾಗಿ ಧಾರಣೆ ಮಾಡಿಕೊಳ್ಳುತ್ತಾರೆ, ಕೆಲವರು ಕಡಿಮೆ ಧಾರಣೆ ಮಾಡುತ್ತಾರೆ ಆದ್ದರಿಂದ ಭಾಗ್ಯವೂ
ಸಹ ನಂಬರ್ವಾರ್ ಸಿಗುತ್ತದೆ. ಶಿಕ್ಷೆಗಳನ್ನು ಅನುಭವಿಸಿ ಪದವಿಯನ್ನು ಪಡೆಯುತ್ತಾರೆ. ಪೂರ್ಣ ನೆನಪು
ಮಾಡದಿದ್ದರೆ ವಿಕರ್ಮಗಳು ವಿನಾಶವಾಗುವುದಿಲ್ಲ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಗುವುದು, ಪದವಿಯೂ
ಭ್ರಷ್ಟವಾಗುತ್ತದೆ. ಹೇಗೆ ಶಾಲೆಯಲ್ಲಿಯೂ ಇದೇ ರೀತಿಯಾಗುತ್ತದೆ. ಇದು ಬೇಹದ್ದಿನ ಜ್ಞಾನವಾಗಿದೆ,
ಇದರಿಂದ ಜೀವನದ ದೋಣಿಯು ಪಾರಾಗುತ್ತದೆ. ಆ ಜ್ಞಾನದಲ್ಲಿ ಬ್ಯಾರಿಸ್ಟರಿ, ಡಾಕ್ಟರಿ, ಇಂಜಿನಿಯರಿ
ವಿದ್ಯೆಯನ್ನು ಓದಬೇಕಾಗುತ್ತದೆ. ಇದಂತೂ ಒಂದೇ ವಿದ್ಯೆಯಾಗಿದೆ. ಯೋಗ ಮತ್ತು ಜ್ಞಾನದಿಂದ ಸದಾ
ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ, ರಾಜ ಕುಮಾರರಾಗಿ ಬಿಡುತ್ತೀರಿ. ಸ್ವರ್ಗದಲ್ಲಿ ಯಾವುದೇ
ವೈದ್ಯರು, ವಕೀಲರು ಇರುವುದಿಲ್ಲ. ಅಲ್ಲಿ ಧರ್ಮ ರಾಜನ ಅವಶ್ಯಕತೆಯೇ ಇರುವುದಿಲ್ಲ. ಗರ್ಭ ಜೈಲಿನ
ಶಿಕ್ಷೆಯಾಗಲಿ, ಧರ್ಮರಾಜನ ಶಿಕ್ಷೆಯಾಗಲಿ ಇರುವುದಿಲ್ಲ. ಗರ್ಭ ಮಹಲಿನಲ್ಲಿ ಬಹಳ ಸುಖಿಯಾಗಿರುತ್ತಾರೆ,
ಇಲ್ಲಾದರೆ ಗರ್ಭ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇವೆಲ್ಲಾ ಮಾತುಗಳನ್ನು ನೀವು
ಮಕ್ಕಳೇ ತಿಳಿದುಕೊಳ್ಳುತ್ತೀರಿ. ಬಾಕಿ ಶಾಸ್ತ್ರಗಳಲ್ಲಿ, ಸಂಸ್ಕೃತದಲ್ಲಿ, ಶ್ಲೋಕ ಇತ್ಯಾದಿಗಳಲ್ಲಿ
ಮನುಷ್ಯರೇ ಬರೆದಿದ್ದಾರೆ. ಸತ್ಯಯುಗದಲ್ಲಿ ಯಾವ ಭಾಷೆಯಿರುವುದು ಎಂದು ಕೇಳುತ್ತಾರೆ. ಇದಕ್ಕೆ
ತಂದೆಯು ತಿಳಿಸುತ್ತಾರೆ, ದೇವತೆಗಳ ಭಾಷೆ ಯಾವುದೋ ಅದೇ ನಡೆಯುವುದು. ಅಲ್ಲಿನ ಭಾಷೆಯು ಮತ್ತೆಲ್ಲಿಯೂ
ಇರಲು ಸಾಧ್ಯವಿಲ್ಲ. ಅಲ್ಲಿ ಸಂಸ್ಕೃತ ಭಾಷೆಯಿರುತ್ತದೆ ಎಂದಲ್ಲ. ದೇವತೆಗಳದು ಮತ್ತು ಮನುಷ್ಯರದು
ಒಂದೇ ಭಾಷೆಯಾಗಲು ಸಾಧ್ಯವಿಲ್ಲ. ಅಲ್ಲಿನ ಭಾಷೆಯು ಯಾವುದೋ ಅದೇ ನಡೆಯುತ್ತದೆ. ಇದನ್ನು ಕೇಳುವ
ಅವಶ್ಯಕತೆ ಇಲ್ಲ. ಮೊದಲು ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳಿ. ಕಲ್ಪದ ಹಿಂದೆ ಏನಾಗಿತ್ತೋ ಅದೇ
ಆಗುವುದು. ಮೊದಲು ಆಸ್ತಿಯನ್ನು ಪಡೆದುಕೊಳ್ಳಿ, ಮತ್ತ್ಯಾವುದೇ ಮಾತನ್ನು ಕೇಳಲೇಬೇಡಿ. 84
ಜನ್ಮಗಳಿಲ್ಲವೆಂದರೆ 80 ಜನ್ಮಗಳಿರಲಿ ಅಥವಾ 82 ಆಗಿರಲಿ, ಈ ಮಾತುಗಳನ್ನು ಬಿಟ್ಟು ಬಿಡಿ. ಕೇವಲ
ತಂದೆಯನ್ನು ನೆನಪು ಮಾಡಿ ಸ್ವರ್ಗದ ರಾಜ್ಯಭಾಗ್ಯವು ಖಂಡಿತ ಸಿಗುತ್ತದೆಯಲ್ಲವೆ. ಅನೇಕ ಬಾರಿ ನೀವು
ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಂಡಿದ್ದೀರಿ. ಮೇಲಿನಿಂದ ಇಳಿಯಲೇಬೇಕಾಗಿದೆ. ನೀವೀಗ ಮಾ||
ಜ್ಞಾನ ಸಾಗರ, ಮಾ|| ಸುಖದ ಸಾಗರರಾಗಿದ್ದೀರಿ. ನೀವು ಪುರುಷಾರ್ಥಿಗಳಾಗಿದ್ದೀರಿ. ತಂದೆಯಂತೂ
ಸಂಪೂರ್ಣರಾಗಿದ್ದಾರೆ. ತಂದೆಯಲ್ಲಿ ಯಾವ ಜ್ಞಾನವಿದೆಯೋ ಅದು ಮಕ್ಕಳಲ್ಲಿದೆ, ಆದರೆ ನಿಮಗೆ
ಸಾಗರನೆಂದು ಹೇಳಲಾಗುವುದಿಲ್ಲ. ಸಾಗರವು ಒಂದೇ ಇರುತ್ತದೆ. ಕೇವಲ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ
ಬಾಕಿ ಜ್ಞಾನ ಸಾಗರನಿಂದ ಹೊರಟಿರುವ ನದಿಗಳಾಗಿದ್ದೀರಿ. ನೀವು ಮಾನಸ ಸರೋವರ ನದಿಗಳಾಗಿದ್ದೀರಿ.
ನದಿಗಳ ಹೆಸರುಗಳೂ ಇವೆ. ಬ್ರಹ್ಮಾ ಪುತ್ರ ನದಿ ಬಹಳ ದೊಡ್ಡದಾಗಿದೆ. ಕಲ್ಕತ್ತಾದಲ್ಲಿ ನದಿ ಮತ್ತು
ಸಾಗರದ ಸಂಗಮವಿದೆ ಅದಕ್ಕೆ ಡೈಮಂಡ್ ಹಾರ್ಬರ್ ಎಂದು ಹೆಸರಿದೆ. ನೀವು ಬ್ರಹ್ಮಾ ಮುಖವಂಶಾವಳಿ ವಜ್ರ
ಸಮಾನ ಆಗುತ್ತೀರಿ, ಬಹಳ ದೊಡ್ಡ ಮೇಳವಾಗುತ್ತದೆ. ತಂದೆಯು ಈ ಬ್ರಹ್ಮಾರವರ ತನುವಿನಲ್ಲಿ ಬಂದು
ಮಕ್ಕಳೊಂದಿಗೆ ಮಿಲನ ಮಾಡುತ್ತಾರೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ ಆದರೂ ಮತ್ತೆ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ತಂದೆಯನ್ನು ನೆನಪು ಮಾಡುತ್ತಾ ಇರಿ, ಅವರು ಪ್ರಿಯಾತಿ
ಪ್ರಿಯ, ಎಲ್ಲಾ ಸಂಬಂಧಗಳ ಸ್ಯಾಕ್ರೀನ್ ಆಗಿದ್ದರು. ಆ ಸಂಬಂಧಿಗಳೆಲ್ಲರೂ ವಿಕಾರಿಯಾಗಿದ್ದಾರೆ.
ಅವರಿಂದ ದುಃಖವೇ ಸಿಗುತ್ತದೆ. ತಂದೆಯು ನಿಮಗೆ ಎಲ್ಲದರ ಪ್ರತಿಫಲವನ್ನು ಕೊಡುತ್ತಾರೆ. ಎಲ್ಲಾ
ಸಂಬಂಧಗಳ ಪ್ರೀತಿಯನ್ನು ಕೊಡುತ್ತಾರೆ, ಎಷ್ಟೊಂದು ಸುಖ ಕೊಡುತ್ತಾರೆ. ಇಷ್ಟು ಸುಖವನ್ನು ಮತ್ತ್ಯಾರೂ
ಕೊಡಲು ಸಾಧ್ಯವಿಲ್ಲ. ಯಾರಾದರೂ ಕೊಟ್ಟರೂ ಸಹ ಅಲ್ಪಕಾಲಕ್ಕಾಗಿ. ಇದಕ್ಕೆ ಸನ್ಯಾಸಿಗಳು
ಕಾಗವಿಷ್ಟಸಮಾನ ಸುಖವೆಂದು ಹೇಳುತ್ತಾರೆ. ದುಃಖಧಾಮದಲ್ಲಂತೂ ಅವಶ್ಯವಾಗಿ ದುಃಖವೇ ಇರುವುದು. ನೀವು
ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಅನೇಕ ಬಾರಿ ಪಾತ್ರವನ್ನು ಅಭಿನಯಿಸಿದ್ದೇವೆ ಆದರೆ ನಾವು
ಶ್ರೇಷ್ಠ ಪದವಿಯನ್ನು ಹೇಗೆ ಪಡೆಯಬೇಕೆಂಬ ಚಿಂತೆಯಿರಬೇಕು. ನಾವು ಅಲ್ಲಿ ಅನುತ್ತೀರ್ಣರಾಗಬಾರದು.
ಅದಕ್ಕಾಗಿ ಬಹಳ ಪುರುಷಾರ್ಥ ಮಾಡಬೇಕಾಗಿದೆ. ಒಳ್ಳೆಯ ಅಂಕಗಳಿಂದ ತೇರ್ಗಡೆಯಾದರೆ ಶ್ರೇಷ್ಠ
ಪದವಿಯನ್ನು ಪಡೆಯುವರು ಮತ್ತು ಅವರಿಗೆ ಖುಷಿಯೂ ಇರುವುದು. ಎಲ್ಲರೂ ಒಂದೇ ಸಮಾನರಾಗಲು ಸಾಧ್ಯವಿಲ್ಲ.
ಎಷ್ಟು ಯೋಗವಿದೆಯೋ ಅಷ್ಟೇ ಆಗುವರು. ಅನೇಕರು ಇಂತಹ ಗೋಪಿಕೆಯರಿದ್ದಾರೆ, ಎಂದೂ ಮಿಲನ ಮಾಡಿಯೂ ಇಲ್ಲ.
ತಂದೆಯೊಂದಿಗೆ ಮಿಲನ ಮಾಡಲು ಚಡ ಪಡಿಸುತ್ತಾರೆ. ಸಾಧು-ಸನ್ಯಾಸಿಗಳ ಬಳಿ ಚಡ ಪಡಿಸುವ
ಮಾತಿರುವುದಿಲ್ಲ. ಇಲ್ಲಂತೂ ಶಿವ ತಂದೆಯೊಂದಿಗೆ ಮಿಲನ ಮಾಡುವುದಕ್ಕಾಗಿ ಬರುತ್ತೀರಿ, ಆಶ್ಚರ್ಯದ
ಮಾತಲ್ಲವೆ. ಬಾಬಾ, ನಾವು ನಿಮ್ಮ ಮಕ್ಕಳಾಗಿದ್ದೇವೆ ಎಂದು ಮನೆಯಲ್ಲಿ ಕುಳಿತು ನೆನಪು ಮಾಡುತ್ತಾರೆ,
ಆತ್ಮಕ್ಕೆ ಸ್ಮೃತಿ ಬರುತ್ತದೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಶಿವ ತಂದೆಯಿಂದ
ಕಲ್ಪ-ಕಲ್ಪವೂ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ, ಆ ತಂದೆಯೇ ಕಲ್ಪದ ನಂತರ ಪುನಃ ಬಂದಿದ್ದಾರೆ.
ಅವರನ್ನು ನೋಡದೇ ಇರಲು ಸಾಧ್ಯವಿಲ್ಲ. ತಂದೆಯು ಬಂದಿದ್ದಾರೆಂದು ಆತ್ಮಕ್ಕೆ ತಿಳಿದಿದೆ. ಶಿವ
ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಶಿವ ತಂದೆಯು ಬಂದು ಓದಿಸುತ್ತಾರೆ,
ಇದನ್ನೂ ತಿಳಿದುಕೊಳ್ಳುವುದಿಲ್ಲ, ಕೇವಲ ನಾಮ ಮಾತ್ರಕ್ಕೆ ಆಚರಿಸುತ್ತಾರೆ. ರಜಾ ದಿನವನ್ನೂ
ಘೋಷಿಸುವುದಿಲ್ಲ. ಯಾರು ಆಸ್ತಿಯನ್ನು ಕೊಟ್ಟರೋ ಅವರಿಗೆ ಮಹತ್ವವನ್ನೇ ನೀಡುವುದಿಲ್ಲ ಮತ್ತು ಯಾರಿಗೆ
ಆಸ್ತಿಯನ್ನು ಕೊಟ್ಟರೋ (ಕೃಷ್ಣನಿಗೆ) ಅವರ ಹೆಸರನ್ನು ಪ್ರಖ್ಯಾತ ಮಾಡಿ ಬಿಟ್ಟಿದ್ದಾರೆ. ವಿಶೇಷವಾಗಿ
ತಂದೆಯು ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದಾರೆ. ಉಳಿದೆಲ್ಲರಿಗೆ ಮುಕ್ತಿ ನೀಡುತ್ತಾರೆ.
ಎಲ್ಲರೂ ಇದನ್ನು ಬಯಸುವರು. ನೀವು ತಿಳಿದುಕೊಂಡಿದ್ದೀರಿ - ಮುಕ್ತಿಯ ನಂತರ ಜೀವನ್ಮುಕ್ತಿ ಸಿಗುವುದು.
ತಂದೆಯು ಬಂದು ಮಾಯೆಯ ಬಂಧನದಿಂದ ಮುಕ್ತಗೊಳಿಸುತ್ತಾರೆ. ತಂದೆಗೆ ಸರ್ವರ ಸದ್ಗತಿದಾತನೆಂದು
ಹೇಳಲಾಗುತ್ತದೆ. ಜೀವನ್ಮುಕ್ತಿಯಂತೂ ನಂಬರ್ವಾರ್ ಪುರುಷಾರ್ಥದನುಸಾರ ಎಲ್ಲರಿಗೂ ಸಿಗುತ್ತದೆ.
ತಂದೆಯು ತಿಳಿಸುತ್ತಾರೆ - ಈಗ ಪತಿತ ಪ್ರಪಂಚ, ದುಃಖಧಾಮವಾಗಿದೆ. ಸತ್ಯಯುಗದಲ್ಲಿ ನಿಮಗೆ ಎಷ್ಟೊಂದು
ಸುಖ ಸಿಗುತ್ತದೆ! ಅದಕ್ಕೆ ಬಹಿಶ್ತ್ ಎಂದು ಹೇಳುತ್ತಾರೆ. ಅಲ್ಲಾನು ಬಹಿಶ್ತ್ನ್ನು ಏತಕ್ಕಾಗಿ
ರಚಿಸಿದರು? ಕೇವಲ ಮುಸಲ್ಮಾನರಿಗಾಗಿ ರಚಿಸಿದರೇ? ತಮ್ಮ-ತಮ್ಮ ಭಾಷೆಗಳಲ್ಲಿ ಕೆಲವರು ಸ್ವರ್ಗವೆಂದು,
ಕೆಲವರು ಬಹಿಶ್ತ್ ಎಂದೂ ಹೇಳುತ್ತಾರೆ. ಸ್ವರ್ಗದಲ್ಲಿ ಕೇವಲ ಭಾರತವೇ ಇರುತ್ತದೆ. ಇವೆಲ್ಲಾ ಮಾತುಗಳು
ನೀವು ಮಕ್ಕಳ ಬುದ್ಧಿಯಲ್ಲಿ ನಂಬರ್ವಾರ್ ಪುರುಷಾರ್ಥದನುಸಾರ ಕುಳಿತುಕೊಂಡಿದೆ. ನಾನು ಅಲ್ಲಾನ
ಉದ್ಯಾನವನದಲ್ಲಿ ಹೋಗಿದ್ದೆನೆಂದು ಒಬ್ಬರು ಮುಸಲ್ಮಾನರು ಹೇಳುತ್ತಿದ್ದರು. ಇವೆಲ್ಲವೂ
ಸಾಕ್ಷಾತ್ಕಾರವಾಗುತ್ತದೆ. ಡ್ರಾಮಾದಲ್ಲಿ ಮೊದಲಿನಿಂದಲೇ ಇದೆಲ್ಲವೂ ನಿಗಧಿಯಾಗಿದೆ. ಡ್ರಾಮಾದಲ್ಲಿ
ಏನೆಲ್ಲವೂ ಆಗುವುದೋ ಕ್ಷಣವು ಕಳೆಯಿತೆಂದರೆ ಇದು ಮೊದಲೂ ಆಗಿತ್ತು ಎಂದು ಹೇಳುತ್ತಾರೆ. ನಾಳೆ
ಏನಾಗುವುದು? ಇದು ಯಾರಿಗೂ ಗೊತ್ತಿಲ್ಲ ಆದ್ದರಿಂದ ಡ್ರಾಮಾದ ಮೇಲೆ ನಿಶ್ಚಯವಿರಬೇಕು. ಇದರಲ್ಲಿ
ಯಾವುದೇ ಚಿಂತೆಯಿರುವುದಿಲ್ಲ. ನಮಗಂತೂ ತಂದೆಯು ಆಜ್ಞೆ ಮಾಡಿದ್ದಾರೆ, ನನ್ನೊಬ್ಬನನ್ನೇ ನೆನಪು ಮಾಡಿ,
ತಮ್ಮ ಆಸ್ತಿಯನ್ನು ನೆನಪು ಮಾಡಿ, ಎಲ್ಲರೂ ಸಮಾಪ್ತಿಯಾಗಲೇಬೇಕಾಗಿದೆ. ಯಾರು ಯಾರಿಗಾಗಿಯೂ
ಉಳಿಯುವುದಿಲ್ಲ. ಮೃತ್ಯು ಬಂದಿತೆಂದರೆ ಹೊರಟು ಹೋಗುವರು, ಅಳುವುದಕ್ಕೂ ಬಿಡುವಿರುವುದಿಲ್ಲ, ಶಬ್ಧವೇ
ಹೊರಡುವುದಿಲ್ಲ, ಇತ್ತೀಚೆಗಂತೂ ಮನುಷ್ಯರು ಶವಸುಟ್ಟಿರುವ ಬೂದಿಯನ್ನೂ ಸಹ ತೆಗೆದುಕೊಂಡು ಎಷ್ಟೊಂದು
ಪರಿಕ್ರಮಣ ಮಾಡುತ್ತಾರೆ. ಈ ಭಾವನೆಯು ಕುಳಿತಿರುತ್ತದೆ ಆದರೆ ಇದೆಲ್ಲವೂ ಸಮಯದ ವ್ಯರ್ಥವಾಗಿದೆ.
ಇದರಲ್ಲೇನಿದೆ, ಮಣ್ಣು-ಮಣ್ಣಿನಲ್ಲಿ ಸೇರಿ ಹೋಗುವುದು. ಇದರಿಂದ ಭಾರತವು ಪವಿತ್ರವಾಗಿ ಬಿಡುವುದೇ?
ಪತಿತ ಪ್ರಪಂಚದಲ್ಲಿ ಯಾವುದೇ ಕರ್ಮ ಮಾಡಿದರೂ ಪತಿತ ಕರ್ಮವನ್ನೇ ಮಾಡುವರು. ದಾನ, ಪುಣ್ಯ
ಇತ್ಯಾದಿಗಳನ್ನು ಮಾಡುತ್ತಾ ಬಂದಿದ್ದಾರೆ ಅಂದಮೇಲೆ ಇದರಿಂದ ಭಾರತವು ಪಾವನವಾಗಿದೆಯೇ? ಇನ್ನೂ
ಏಣಿಯನ್ನು ಇಳಿಯಲೇಬೇಕಾಗಿದೆ. ಸತ್ಯಯುಗದಲ್ಲಿ ಸೂರ್ಯವಂಶಿಯರಾದರು, ನಂತರ ಏಣಿಯನ್ನು
ಇಳಿಯಬೇಕಾಗುವುದು. ನಿಧಾನ-ನಿಧಾನವಾಗಿ ಇಳಿಯುತ್ತೀರಿ. ಎಷ್ಟಾದರೂ ಯಜ್ಞ, ತಪ ಇತ್ಯಾದಿಗಳನ್ನು
ಮಾಡಿದರೂ ಸಹ ಭಲೆ ಇನ್ನೊಂದು ಜನ್ಮದಲ್ಲಿ ಅಲ್ಪಕಾಲದ ಫಲ ಸಿಗುತ್ತದೆ. ಯಾರಾದರೂ ಕೆಟ್ಟ ಕರ್ಮ
ಮಾಡಿದರೂ ಸಹ ಅದರ ಪ್ರತಿಫಲವು ಅವರಿಗೆ ಸಿಗುತ್ತದೆ. ಬೇಹದ್ದಿನ ತಂದೆಗೆ ಗೊತ್ತಿದೆ, ಮಕ್ಕಳಿಗೆ
ಓದಿಸಲು ಬಂದಿದ್ದೇನೆ ಎಂದು. ಸಾಧಾರಣ ತನುವನ್ನು ತೆಗೆದುಕೊಂಡಿದ್ದಾರೆ. ಯಾವುದೇ ತಿಲಕ
ಇತ್ಯಾದಿಗಳನ್ನು ಇಡುವ ಅವಶ್ಯಕತೆಯೂ ಇಲ್ಲ. ಭಕ್ತರಂತೂ ಬಹಳ ದೊಡ್ಡ-ದೊಡ್ಡದಾಗಿ
ತಿಲಕವನ್ನಿಟ್ಟುಕೊಳ್ಳುತ್ತಾರೆ ಆದರೆ ಕೆಲವರು ಅದರಲ್ಲಿ ಬಹಳ ಮೋಸ ಮಾಡುತ್ತಾರೆ. ತಂದೆಯು
ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆ, ಬಂದು ನೀವು ಮಕ್ಕಳಿಗೆ ಓದಿಸುತ್ತೇನೆ.
ಇದು ವಾನಪ್ರಸ್ಥ ಸ್ಥಿತಿಯಾಯಿತು, ಕೃಷ್ಣನ ಹೆಸರನ್ನು ಏಕೆ ಹಾಕಿದರು? ಇಲ್ಲಿ ಇದನ್ನು ನಿರ್ಣಯ
ಮಾಡುವ ಬುದ್ಧಿಯೂ ಇಲ್ಲ. ಈಗ ತಂದೆಯು ಸರಿ-ತಪ್ಪನ್ನು ನಿರ್ಣಯಿಸುವ ಬುದ್ಧಿಯನ್ನೂ ನೀಡಿದ್ದಾರೆ.
ತಂದೆಯು ತಿಳಿಸುತ್ತಾರೆ,
ನೀವು ಯಜ್ಞ, ತಪ ದಾನ-ಪುಣ್ಯಗಳನ್ನು ಮಾಡುತ್ತಾ, ಶಾಸ್ತ್ರಗಳನ್ನು ಓದುತ್ತಾ ಬಂದಿದ್ದೀರಿ ಅಂದಾಗ ಆ
ಶಾಸ್ತ್ರಗಳಲ್ಲಿ ಏನಾದರೂ ಇದೆಯೇ? ನಾನಂತೂ ನಿಮಗೆ ರಾಜಯೋಗವನ್ನು ಕಲಿಸಿ ವಿಶ್ವದ ರಾಜ್ಯಭಾಗ್ಯವನ್ನು
ಕೊಟ್ಟೆನೇ? ಅಥವಾ ಕೃಷ್ಣನು ಕೊಟ್ಟನೆ? ಪರಿಶೀಲನೆ ಮಾಡಿ. ಬಾಬಾ, ತಾವೇ ತಿಳಿಸಿದ್ದಿರಿ ಎಂದು
ಹೇಳುತ್ತೀರಿ. ಕೃಷ್ಣನಂತೂ ಚಿಕ್ಕ ರಾಜಕುಮಾರನಾಗಿದ್ದಾನೆ, ಕೃಷ್ಣನು ಹೇಗೆ ತಿಳಿಸುವನು? ಬಾಬಾ,
ತಮ್ಮದೇ ರಾಜಯೋಗದಿಂದ ನಾವು ಈ ರೀತಿಯಾಗುತ್ತೇವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಶರೀರದ ಮೇಲೆ
ಯಾವುದೇ ಭರವಸೆಯಿಲ್ಲ ಆದ್ದರಿಂದ ಬಹಳ ಪುರುಷಾರ್ಥ ಮಾಡಬೇಕಾಗಿದೆ. ಬಾಬಾ, ಇಂತಹವರು ಬಹಳ ಒಳ್ಳೆಯ
ನಿಶ್ಚಯ ಬುದ್ಧಿಯವರೆಂದು ತಂದೆಗೆ ಸಮಾಚಾರವನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ -
ನಿಶ್ಚಯವು ಸ್ವಲ್ಪವೂ ಇಲ್ಲವೆಂದು ನಾನು ಹೇಳುತ್ತೇನೆ. ಯಾರನ್ನು ಬಹಳ ಪ್ರೀತಿ ಮಾಡಿದೆವೋ ಅವರು
ಇಂದು ಇಲ್ಲ. ತಂದೆಯಂತೂ ಎಲ್ಲರ ಜೊತೆ ಬಹಳ ಪ್ರೀತಿಯಿಂದ ನಡೆಯುತ್ತಾರೆ. ನಾನು ಎಂತಹ ಕರ್ಮ
ಮಾಡುವೆನೋ ನನ್ನನ್ನು ನೋಡಿ ಅನ್ಯರು ಮಾಡುವರು. ಕೆಲವರಂತೂ ವಿಕಾರದಲ್ಲಿ ಹೋಗಿ ಮತ್ತೆ ಬಂದು
ಮುಚ್ಚಿಟ್ಟುಕೊಂಡು ಕುಳಿತುಕೊಳ್ಳುತ್ತಾರೆ. ತಂದೆಯು ಕೂಡಲೇ ಸಂದೇಶಿಗೆ ತಿಳಿಸಿ ಬಿಡುತ್ತಾರೆ.
ಇಂತಹ ಕರ್ಮ ಮಾಡುವವರು ಬಹಳ ನಾಜೂಕಾಗುತ್ತಾ ಹೋಗುತ್ತಾರೆ. ಮುಂದೆ ನಡೆಯಲು ಸಾಧ್ಯವಾಗುವುದಿಲ್ಲ.
ಅಂತಿಮದ ನಾಜೂಕು ಸಮಯದಲ್ಲಿ ಯಾರಾದರೂ ಸ್ವಲ್ಪವೇನಾದರೂ ಮಾಡಿದರೂ ಸಹ ಒಮ್ಮೆಲೆ ಅವರ ಮೇಲೆ ಕ್ರಮ
ಕೈಗೊಳ್ಳಲಾಗುತ್ತದೆ. ಮುಂದೆ ಹೋದಂತೆ ನೀವು ಬಹಳ ನೋಡುವಿರಿ, ತಂದೆಯು ಏನೇನು ಮಾಡುತ್ತಾರೆ ಎಂದು.
ತಂದೆಯೇ ಶಿಕ್ಷೆಯನ್ನು ಕೊಡುವುದಿಲ್ಲ, ಧರ್ಮರಾಜನ ಮೂಲಕ ಕೊಡಿಸುತ್ತಾರೆ. ಜ್ಞಾನದಲ್ಲಿ ಪ್ರೇರಣೆಯ
ಮಾತಿಲ್ಲ. ಭಗವಂತನಿಗೆ ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿ ಎಂದು ಎಲ್ಲಾ ಮನುಷ್ಯರು
ಕರೆಯುತ್ತಾರೆ. ಎಲ್ಲಾ ಆತ್ಮರು ಕರ್ಮೇಂದ್ರಿಯಗಳ ಮೂಲಕ ಕೂಗುತ್ತಾರೆ. ತಂದೆಯೇ ಜ್ಞಾನ
ಸಾಗರನಾಗಿದ್ದಾರೆ. ಅವರ ಬಳಿ ಬಹಳ ವಿಭಿನ್ನ ಪ್ರಕಾರದ ಸಾಮಾನುಗಳಿವೆ. ಇಂತಹ ಸಾಮಾನು ಮತ್ತ್ಯಾರ
ಬಳಿಯೂ ಇಲ್ಲ. ಕೃಷ್ಣನ ಮಹಿಮೆಯು ಸಂಪೂರ್ಣ ಬೇರೆಯಾಗಿದೆ. ತಂದೆಯ ಶಿಕ್ಷಣದಿಂದ ಇವರು
ಲಕ್ಷ್ಮೀ-ನಾರಾಯಣ ಹೇಗಾದರು? ಮಾಡುವವರಂತೂ ತಂದೆಯೇ ಆಗಿದ್ದಾರೆ, ತಂದೆಯು ಬಂದು ಕರ್ಮ, ಅಕರ್ಮ,
ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ಈಗ ನಿಮ್ಮ ಮೂರನೇ ನೇತ್ರವು ತೆರೆದಿದೆ. ನೀವು
ತಿಳಿದುಕೊಂಡಿದ್ದೀರಿ - ಇದು 5000 ವರ್ಷದ ಮಾತಾಗಿದೆ. ಈಗ ಮನೆಗೆ ಹೋಗಬೇಕಾಗಿದೆ, ಪಾತ್ರವನ್ನು
ಅಭಿನಯಿಸಬೇಕಾಗಿದೆ. ಇದು ಸ್ವದರ್ಶನ ಚಕ್ರವಲ್ಲವೆ. ನಿಮ್ಮ ಹೆಸರಾಗಿದೆ - ಸ್ವದರ್ಶನ ಚಕ್ರಧಾರಿಗಳು,
ಬ್ರಾಹ್ಮಣ ಕು ಲಭೂಷಣರು, ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು. ಲಕ್ಷಾಂತರ ಅಂದಾಜಿನಲ್ಲಿ
ಸ್ವದರ್ಶನ ಚಕ್ರಧಾರಿಗಳು ಆಗುತ್ತಾರೆ. ನೀವು ಎಷ್ಟೊಂದು ಓದುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ಸಮಯವು
ಬಹಳ ನಾಜೂಕಾಗಿದೆ ಆದ್ದರಿಂದ ಯಾವುದೇ ಉಲ್ಟಾ ಕರ್ಮ ಮಾಡಬಾರದು. ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು
ಗಮನದಲ್ಲಿಟ್ಟುಕೊಂಡು ಸದಾ ಶ್ರೇಷ್ಠ ಕರ್ಮವನ್ನೇ ಮಾಡಬೇಕಾಗಿದೆ.
2. ಯೋಗದಿಂದ ತಮ್ಮ
ಕಾಯವನ್ನು ಸದಾಕಾಲಕ್ಕಾಗಿ ನಿರೋಗಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಒಬ್ಬ ಪ್ರಿಯಾತಿ ಪ್ರಿಯ
ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯಿಂದ ಯಾವ ಅವಿನಾಶಿ ಜ್ಞಾನ ಧನ ಸಿಗುತ್ತದೆಯೋ ಅದನ್ನು
ದಾನ ಮಾಡಬೇಕಾಗಿದೆ.
ವರದಾನ:
ಸಹನಶೀಲತೆಯ
ಗುಣದ ಮೂಲಕ ಕಠೋರ ಸಂಸ್ಕಾರವನ್ನೂ ಶೀತಲವನ್ನಾಗಿ ಮಾಡುವಂತಹ ಸಂತುಷ್ಟಮಣಿ ಭವ.
ಯಾರಲ್ಲಿ ಸಹನಶೀಲತೆಯ
ಗುಣವಿರುತ್ತದೆಯೋ ಅವರ ಚಹರೆಯಿಂದ ಸದಾ ಸಂತುಷ್ಟತೆಯು ಕಂಡು ಬರುತ್ತದೆ, ಯಾರು ಸ್ವಯಂನಿಂದ
ಸಂತುಷ್ಟ ಮೂರ್ತಿಯಾಗಿ ಇರುತ್ತಾರೆಯೋ ಅವರು ಅನ್ಯರನ್ನೂ ಸಂತುಷ್ಟ ಪಡಿಸುತ್ತಾರೆ.
ಸಂತುಷ್ಟರಾಗುವುದು ಎಂದರೆ ಸಫಲತೆಯನ್ನು ಪಡೆಯುವುದಾಗಿದೆ. ಯಾರು ಸಹನಶೀಲರಾಗಿ ಇರುತ್ತಾರೆಯೋ ಅವರು
ಕಠೋರ ಸಂಸ್ಕಾರ ಅಥವಾ ಕಠಿಣ ಕಾರ್ಯವನ್ನೂ ಶೀತಲ ಮತ್ತು ಸಹಜ ಮಾಡಿ ಬಿಡುತ್ತಾರೆ. ಅವರ ಚಹರೆಯೇ
ಗುಣಮೂರ್ತಿಯಾಗಿ ಕಾಣಿಸುತ್ತದೆ - ಇಂತಹವರೇ ಡ್ರಾಮಾದ ಪಟ್ಟೆಯ ಮೇಲೆ ಸ್ಥಿರವಾಗಲು ಸಾಧ್ಯವಾಗುತ್ತದೆ.
ಸ್ಲೋಗನ್:
ಯಾರು ವಾಣಿಯ
ಮೂಲಕ ಬದಲಾಗುವುದಿಲ್ಲವೋ ಅವರನ್ನು ಶುಭ ಪ್ರಕಂಪನಗಳ ಮೂಲಕ ಪರಿವರ್ತಿಸಬಹುದು.
ಅವ್ಯಕ್ತ ಸೂಚನೆ:–
“ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”
ಹೇಗೆ ಬ್ರಹ್ಮಾ ತಂದೆಯ
ಮಾತು ಫರಿಸ್ತೆಗಳ ಮಾತು, ಕಡಿಮೆ ಮಾತು ಮತ್ತು ಮಧುರ ಮಾತು ಆಗಿತ್ತು. ಇಂತಹ ಯಥಾರ್ಥ ಮಾತುಗಳನ್ನು
ಮಾತನಾಡಿ. ಕಾರೋಬಾರಗಾಗಿ ಮಾತನಾಡಬೇಕಾಗುತ್ತದೆ ಆದರೆ ಅದನ್ನು ದೊಡ್ಡದಾಗಿ ಮಾಡಬೇಡಿ. ಪ್ರತಿ
ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ ಫಾಲೋ ಫಾದರ್ ಮಾಡಿ. ಪ್ರತಿ ಮಾತಿನಲ್ಲಿ ಮಧುರತೆ, ನಮ್ರತೆಯ
ಮಹಾನತೆಯಾಗಿದೆ. ಇದಕ್ಕಾಗಿ ಸ್ವಯಂನ್ನು ನಿಮಿತ್ತವೆಂದು ತಿಳಿದು ಪ್ರತಿ ಕಾರ್ಯ ಮಾಡಿ ಆಗ ಮಹಾನತೆಯ
ಜೊತೆ ನಮ್ರತೆಯು ಬರುವುದು ಮತ್ತು ಸಫಲತಾಮೂರ್ತರಾಗುವಿರಿ.