27.08.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈಗ ಈ
ಬೇಹದ್ದಿನ ಹಳೆಯ ಪ್ರಪಂಚದ ವಿನಾಶವಾಗಲಿದೆ, ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ ಆದ್ದರಿಂದ ಹೊಸ
ಪ್ರಪಂಚದಲ್ಲಿ ಹೋಗುವುದಕ್ಕಾಗಿ ಪವಿತ್ರರಾಗಿ”
ಪ್ರಶ್ನೆ:
ಪರಮಾತ್ಮನ ಬಗ್ಗೆ
ನೀವು ಮಕ್ಕಳು ಯಾವ ಅದ್ಭುತ ಮಾತನ್ನು ತಿಳಿದುಕೊಂಡಿದ್ದೀರಿ ಯಾವುದು ಮನುಷ್ಯರ ತಿಳುವಳಿಕೆಗಿಂತ
ದೂರವಿದೆ?
ಉತ್ತರ:
ನೀವು
ಹೇಳುತ್ತೀರಿ - ಹೇಗೆ ಆತ್ಮವು ಜ್ಯೋತಿ ರ್ಬಿಂದುವಾಗಿದೆಯೋ ಹಾಗೆಯೇ ಪರಮಾತ್ಮನೂ ಸಹ ಅತಿ ಸೂಕ್ಷ್ಮ
ಜ್ಯೋತಿ ರ್ಬಿಂದುವಾಗಿದ್ದಾರೆ, ಈ ಅದ್ಭುತ ಮಾತುಗಳು ಮನುಷ್ಯರ ತಿಳುವಳಿಕೆಗಿಂತ ದೂರವಿದೆ. ಕೆಲವು
ಮಕ್ಕಳೂ ಸಹ ಇದರಲ್ಲಿ ತಬ್ಬಿಬ್ಬಾಗುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಬ್ಬಿಬ್ಬಾಗಬೇಡಿ.
ಒಂದುವೇಳೆ ಚಿಕ್ಕ ರೂಪದಲ್ಲಿ ನೆನಪು ನಿಲ್ಲುವುದಿಲ್ಲವೆಂದರೆ ದೊಡ್ಡ ರೂಪದಲ್ಲಿಯೇ ನೆನಪು ಮಾಡಿರಿ
ಆದರೆ ಅವಶ್ಯವಾಗಿ ನೆನಪು ಮಾಡಬೇಕಾಗಿದೆ.
ಗೀತೆ:
ರಾತ್ರಿಯ
ಪ್ರಯಾಣಿಕನೇ ಸುಸ್ತಾಗಬೇಡ...........
ಓಂ ಶಾಂತಿ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಾರೆ, ಆದ್ದರಿಂದ ಮಕ್ಕಳೇ, ಆತ್ಮಾಭಿಮಾನಿಗಳಾಗಿ
ಕುಳಿತುಕೊಳ್ಳಬೇಕಾಗಿದೆ. ಈ ರೀತಿ ಮತ್ತೆಲ್ಲಿಯೂ ತಿಳಿಸುವುದಿಲ್ಲ. ಯಾವುದೇ ಸಾಧು-ಸಂತ ಮೊದಲಾದವರೂ
ಸಹ ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿರಿ ಎಂದು ತಿಳಿಸುವುದಿಲ್ಲ. ಇದನ್ನು ಒಬ್ಬ ತಂದೆಯೇ
ತಿಳಿಸುತ್ತಾರೆ. ಮತ್ತ್ಯಾರಿಗೂ ಹೇಳಲು ಬರುವುದೇ ಇಲ್ಲ, ಈ ಯುಕ್ತಿಯನ್ನು ಮತ್ತ್ಯಾರೂ ತಿಳಿಸಲು
ಸಾಧ್ಯವಿಲ್ಲ. ನೀವು ಮಕ್ಕಳೂ ತಿಳಿದುಕೊಂಡಿದ್ದೀರಿ, ನಾವಾತ್ಮರಾಗಿದ್ದೇವೆ, ಆತ್ಮವೇ ಬಂದು
ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ವಕೀಲ, ಕೆಲವೊಮ್ಮೆ
ವೈದ್ಯನಾಗುತ್ತದೆ, ಆತ್ಮವೇ ಈಗ ಪತಿತವಾಗಿದೆ ಮತ್ತೆ ಪಾವನವಾಗುತ್ತದೆ. ಆತ್ಮದಲ್ಲಿ ಜ್ಞಾನ
ಧಾರಣೆಯಾಗುತ್ತದೆ. ತಂದೆಯು ನಿರಾಕಾರ ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಬಂದು
ಜ್ಞಾನವನ್ನು ತಿಳಿಸುತ್ತಾರಲ್ಲವೆ. ಪತಿತ-ಪಾವನನಾಗಿದ್ದಾರೆ, ಆದ್ದರಿಂದ ಅವಶ್ಯವಾಗಿ ಬಂದು
ಪಾವನರನ್ನಾಗಿ ಮಾಡುತ್ತಾರೆ. ಅವರು ಪಾರಲೌಕಿಕ ಪರಮಪಿತ ಪರಮಾತ್ಮನಾಗಿದ್ದಾರೆ. ತಿಳಿಸುತ್ತಾರೆ -
ನಾನು ನಿಮ್ಮ ಪಾರಲೌಕಿಕ ತಂದೆಯಾಗಿದ್ದೇನೆ, ಜ್ಞಾನ ಸಾಗರನಾಗಿದ್ದೇನೆ. ನನಗೆ ನನ್ನದೇ ಆದ
ಶರೀರವಿಲ್ಲ. ಇದೆಲ್ಲಾ ಜ್ಞಾನವನ್ನು ನೀವಾತ್ಮರು ಧಾರಣೆ ಮಾಡಿಕೊಳ್ಳುತ್ತೀರಿ ಅಂದಾಗ ನೀವು
ಆತ್ಮಾಭಿಮಾನಿಗಳಾಗಬೇಕಾಗಿದೆ. ದೇಹಾಭಿಮಾನವನ್ನು ಇಟ್ಟುಕೊಳ್ಳಬಾರದು. ಕೇಳುವವರೂ ಮತ್ತು ಹೇಳುವವರೂ
ಇಬ್ಬರೂ ದೇಹಾಭಿಮಾನಿಯಾಗಿರುವ ಸ್ಥಳವು ಮತ್ತೆಲ್ಲಿಯೂ ಇರುವುದಿಲ್ಲ. ತಂದೆಯಂತೂ
ನಿರಾಕಾರನಾಗಿದ್ದಾರೆ, ಅವರು ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತಾರೆ. ಉಳಿದೆಲ್ಲಾ ಮನುಷ್ಯರು
ದೇಹಾಭಿಮಾನಿಗಳಾಗಿದ್ದಾರೆ. ಭಲೆ ಈ ಲಕ್ಷ್ಮೀ-ನಾರಾಯಣರು ಆತ್ಮಾಭಿಮಾನಿಯಾಗಿದ್ದರು ಎಂದು
ಹೇಳುತ್ತಾರೆ ಆದರೂ ಸಹ ದೇಹಾಭಿಮಾನವಂತೂ ಇರುತ್ತದೆಯಲ್ಲವೆ. ಈ ಜ್ಞಾನವನ್ನು ಪರಮಪಿತ ಪರಮಾತ್ಮನೇ
ಬಂದು ಕೊಡುತ್ತಾರೆ, ಆತ್ಮವು ಧಾರಣೆ ಮಾಡಿಕೊಳ್ಳುತ್ತದೆ. ಆತ್ಮಕ್ಕೆ ಪತಿತನಿಂದ ಪಾವನವಾಗುವ
ಯುಕ್ತಿಯನ್ನು ತಿಳಿಸುತ್ತಾರೆ. ಈಗ ಇಡೀ ಪ್ರಪಂಚದ ಅವನತಿಯಾಗಿದೆ, ಪುನಃ ಉನ್ನತಿ ಮಾಡಲು ಬರುತ್ತಾರೆ.
ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅವನತಿ ಎಂದರೆ ವಿನಾಶ, ಉನ್ನತಿ ಎಂದರೆ ಸ್ಥಾಪನೆ.
ಸ್ಥಾಪನೆ ಮತ್ತು ವಿನಾಶ. ಯಾವುದರ ಸ್ಥಾಪನೆ? ಹೊಸ ಪ್ರಪಂಚದ ಸ್ಥಾಪನೆ ಸ್ವರ್ಗದ ಸ್ಥಾಪನೆ ಮತ್ತೆ
ಹಳೆಯ ಪ್ರಪಂಚ, ನರಕದ ವಿನಾಶ. ಸ್ಥಾಪನೆ ಮತ್ತು ವಿನಾಶ. ಕಲಿಯುಗವು ಹಳೆಯ ಪ್ರಪಂಚವಾಗಿದೆ, ಇದರ
ವಿನಾಶವು ಖಂಡಿತ ಆಗಬೇಕಾಗಿದೆ. ವಿನಾಶದ ಚಿಹ್ನೆಯು ಈ ಮಹಾಭಾರಿ ಮಹಾಭಾರತ ಯುದ್ಧವಾಗಿದೆ.
ಮಹಾಭಾರತದ ವೃತ್ತಾಂತವನ್ನು ಮಹಾಭಾರತದ ಶಾಸ್ತ್ರದಲ್ಲಿ ತೋರಿಸುತ್ತಾರೆ. ತಂದೆಯು ಬ್ರಹ್ಮಾರವರ
ಮೂಲಕ ಸ್ಥಾಪನೆ ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಹೊಸ ಪ್ರಪಂಚದ ಸ್ಥಾಪನೆ ಮಾಡುವರಲ್ಲವೆ. ಇದು
ಬೇಹದ್ದಿನ ವಿನಾಶ ಮತ್ತು ಬೇಹದ್ದಿನ ಸ್ಥಾಪನೆಯಾಗಿದೆ. ತಂದೆಯೇ ಮಕ್ಕಳಿಗಾಗಿ ಹೊಸ ಮನೆಯನ್ನು
ಕಟ್ಟಿಸುತ್ತಾರೆ ಮತ್ತೆ ಹಳೆಯದನ್ನು ಸಮಾಪ್ತಿ ಮಾಡಿಸುತ್ತಾರೆ. ನೀವು ತಿಳಿದುಕೊಳ್ಳುತ್ತೀರಿ -
ತಂದೆಯು ಈಗ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ. ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ
ಮಾಡುವುದಕ್ಕಾಗಿ ನಮ್ಮನ್ನು ತಯಾರು ಮಾಡುತ್ತಿದ್ದಾರೆ. ವಿನಾಶಕ್ಕಾಗಿ ಮಹಾಭಾರತ ಯುದ್ಧವು
ಪ್ರಸಿದ್ಧವಾಗಿದೆ. ಇದು ಅದೇ ಸಮಯವಾಗಿದೆ, ಅದೇ ನಕ್ಷತ್ರಗಳು ಬಂದು ಪರಸ್ಪರ ಮಿಲನ ಮಾಡಿವೆ ಯಾವುದು
ಮಹಾಭಾರತದ ಸಮಯದಲ್ಲಿ ಇತ್ತು. ಈ ಏಣಿಯಲ್ಲಿಯೂ ಬರೆಯಲಾಗಿದೆ - ಭಾರತದ ಉತ್ಥಾನ ಮತ್ತು ಪಥನದ
ಅದ್ಭುತ ಕಥೆಯೆಂದು. ಈ ಸಮಯದಲ್ಲಿ ಕಲ್ಪ-ಕಲ್ಪ ಎಂಬ ಹೆಸರು ಬರಬೇಕಾಗಿದೆ. ಆದಿಯಿಂದ ಅಂತ್ಯದವರೆಗೆ
ಮನುಷ್ಯರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ, ಮನುಷ್ಯರ
ಬುದ್ಧಿಗೆ ಒಮ್ಮೆಲೆ ಗಾಡ್ರೇಜ್ ಬೀಗವು ಹಾಕಲ್ಪಟ್ಟಿದೆ. ಈ ಮಾತುಗಳನ್ನು ಮನುಷ್ಯರೇ
ತಿಳಿದುಕೊಳ್ಳಬೇಕಾಗಿದೆ. ಆತ್ಮರು ಪಾತ್ರವನ್ನಭಿನಯಿಸಲು ಇಲ್ಲಿ ಶರೀರಧಾರಣೆ ಮಾಡಿಕೊಳ್ಳುತ್ತೀರಿ
ಅಂದಮೇಲೆ ಡ್ರಾಮಾದ ಆದಿ-ಮಧ್ಯ-ಅಂತ್ಯದ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿ ಮೊದಲಾದವರನ್ನು
ಅರಿತುಕೊಳ್ಳಬೇಕಲ್ಲವೆ. ಈಗ ನಿಮಗೆ ಡ್ರಾಮಾದ ಆದಿಯಿಂದ ಹಿಡಿದು ಅಂತ್ಯದವರೆಗೆ ಮೂರೂ ಕಾಲಗಳ
ಜ್ಞಾನವು ಅರ್ಥವಾಗಿದೆ. ತಂದೆಯ ಮೂಲಕ ಇದೆಲ್ಲಾ ಜ್ಞಾನವು ಸಿಗುತ್ತಿದೆ - ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆ! ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ, ದೈಹಿಕ ಜ್ಞಾನಕ್ಕೆ ಫಿಲಾಸಫಿ ಎಂದು
ಹೇಳಲಾಗುತ್ತದೆ. ಆತ್ಮಿಕ ಜ್ಞಾನಕ್ಕೆ ಜ್ಞಾನವೆಂದು ಹೇಳಲಾಗುತ್ತದೆ. ಇವೆಲ್ಲಾ ಮಾತುಗಳನ್ನು ಮಕ್ಕಳ
ಬುದ್ಧಿಯಲ್ಲಿ ಕೂರಿಸಿದ್ದಾರೆ.
ಮಕ್ಕಳಿಗೆ ತಿಳಿದಿದೆ -
ಈಗ 84 ಜನ್ಮಗಳ ನಾಟಕವು ಮುಕ್ತಾಯವಾಗುತ್ತದೆ, ನಾವೀಗ ಹಿಂತಿರುಗಿ ಹೋಗುತ್ತೇವೆ ಆದರೆ ಪತಿತರು ಯಾರೂ
ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಲ್ಲದಿದ್ದರೆ ಇಷ್ಟೊಂದು ಜಪ-ತಪ, ತೀರ್ಥ ಯಾತ್ರೆಗಳನ್ನು ಏಕೆ
ಮಾಡುತ್ತಾರೆ! ಪವಿತ್ರರಾಗುವುದಕ್ಕಾಗಿಯೇ ಗಂಗಾ ಸ್ನಾನ ಮಾಡಲು ಹೋಗುತ್ತಾರೆ ಆದರೆ ಅದರಿಂದ ಯಾರೂ
ಪಾವನರಾಗಲು ಸಾಧ್ಯವಿಲ್ಲ. ಅದರಿಂದ ಯಾರೂ ಹಿಂತಿರುಗಿ ಹೋಗುವುದಕ್ಕೂ ಸಾಧ್ಯವಿಲ್ಲ. ಇಂತಹವರು
ನಿರ್ವಾಣ ಧಾಮಕ್ಕೆ ಹೋದರು, ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತು ಎಂದು ಸುಮ್ಮನೆ
ಹೇಳುತ್ತಿರುತ್ತಾರೆ ಆದರೆ ತಂದೆಯು ತಿಳಿಸಿದ್ದಾರೆ - ಯಾರೂ ಹಿಂತಿರುಗಿ ಹೋಗುವುದಿಲ್ಲ. ಎಲ್ಲಾ
ಪಾತ್ರಧಾರಿಗಳು ಇಲ್ಲಿಯೇ ಇದ್ದಾರೆ, ಈಗ ನಾಟಕವು ಮುಕ್ತಾಯವಾಗುತ್ತದೆ ಆದ್ದರಿಂದ ಎಲ್ಲರೂ ಸ್ಟೇಜಿನ
ಮೇಲೆ ನಿಂತಿದ್ದಾರೆ, ಎಲ್ಲರೂ ಇಲ್ಲಿ ಹಾಜರಿದ್ದಾರೆ. ಬೌದ್ಧರು, ಕ್ರಿಶ್ಚಿಯನ್ನರು
ಇಲ್ಲಿದ್ದಾರೆಂಬುದು ಮನುಷ್ಯರಿಗೆ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಯಾರೆಲ್ಲಾ ಆತ್ಮಗಳು
ಮೇಲಿನಿಂದ ಇಲ್ಲಿಗೆ ಬಂದಿದ್ದಾರೆಯೋ ಎಲ್ಲರೂ ಈ ಸಮಯದಲ್ಲಿ ತಮೋಪ್ರಧಾನರಾಗಿದ್ದಾರೆ.
ತಮೋಪ್ರಧಾನರಿಂದ ಸತೋಪ್ರಧಾನರು ಕಲ್ಪದ ಮೊದಲೂ ಆಗಿದ್ದರು, ತಂದೆಯು ಬಂದು ಸ್ಥಾಪನೆ ಮತ್ತು
ವಿನಾಶವನ್ನು ಮಾಡಿಸುತ್ತಾರೆ. ತಿಳಿಸುತ್ತಾರೆ, ಈ ಜ್ಞಾನವು ರಾಜರಿಗೂ ರಾಜರನ್ನಾಗಿ
ಮಾಡುವಂತದ್ದಾಗಿದೆ. ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಕೃಷ್ಣನಂತೂ ಸ್ಥಾಪನೆ
ಮಾಡಿಸುವುದಿಲ್ಲ, ತಂದೆಯು ರಚಯಿತನಾಗಿದ್ದಾರೆ. ತಂದೆಯೇ ಬಂದು ತಿಳಿಸುತ್ತಾರೆ - ಮಕ್ಕಳೇ, ಯಾವಾಗ
ಸೃಷ್ಟಿಯು ಪತಿತವಾಗುವುದೋ ಆಗ ನೀವು ನನ್ನನ್ನು ಕರೆಯುತ್ತೀರಿ, ನಾನು ಹೊಸ ಸೃಷ್ಟಿಯನ್ನು
ರಚಿಸುತ್ತೇನೆಂದಲ್ಲ. ಪ್ರಳಯವಾಗುತ್ತದೆ ಎಂದು ತೋರಿಸಿರುವುದು ತಪ್ಪಾಗಿದೆ. ಮನುಷ್ಯರು ಕರೆಯುವುದೇ
ಹೇ ಪತಿತ-ಪಾವನ ಬನ್ನಿ ಎಂದು, ಅಂದಮೇಲೆ ಅವಶ್ಯವಾಗಿ ಪತಿತ ಪ್ರಪಂಚದಲ್ಲಿ ಬರುತ್ತಾರಲ್ಲವೆ. ತಂದೆಯೇ
ಬಂದು ಕೃಷ್ಣ ಪುರಿಯ ಸಾಕ್ಷಾತ್ಕಾರ ಮಾಡಿಸುತ್ತಾರೆ, ಕೃಷ್ಣನು ಆಲದ ಎಲೆಯ ಮೇಲೆ ತೇಲಿ ಬಂದನೆಂದು
ತೋರಿಸುತ್ತಾರೆ, ಇದು ಸರಿಯಾದ ಮಾತಾಗಿದೆ. ಹೊಸ ಪ್ರಪಂಚದಲ್ಲಿ ಮೊದಲು ಕೃಷ್ಣನೇ ಬರುತ್ತಾನೆ,
ಸಾಗರದಲ್ಲಿ ಅಲ್ಲ ಗರ್ಭ ಮಹಲಿನಲ್ಲಿ ಬರುತ್ತಾನೆ. ಬೆರಳನ್ನು ಚೀಪುತ್ತಾ ಬಹಳ ಆರಾಮದಿಂದ ಗರ್ಭ
ಮಹಲಿನಲ್ಲಿರುತ್ತಾನೆ. ಸತ್ಯಯುಗದಲ್ಲಿ ಯಾರೆಲ್ಲಾ ಮಕ್ಕಳಿರುವರೋ ಗರ್ಭ ಮಹಲಿನಲ್ಲಿರುತ್ತಾರೆ. ಅವರು
ಗರ್ಭ ಮಹಲಿನ ಮಾತನ್ನು ಸಾಗರದಲ್ಲಿ ಎಲೆಯ ಮೇಲೆ ಕುಳ್ಳರಿಸಿ ತೋರಿಸಿದ್ದಾರೆ. ಅದೆಲ್ಲವೂ
ಭಕ್ತಿಮಾರ್ಗದ ಮಾತುಗಳಾಗಿವೆ. ತಂದೆಯೇ ಇವೆಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಇಲ್ಲಿ
ಗರ್ಭ ಜೈಲಿನಲ್ಲಿರುತ್ತಾರೆ ಆದ್ದರಿಂದ ನಮ್ಮನ್ನು ಹೊರ ತೆಗೆಯಲಿ, ಮತ್ತೆ ನಾವು ಪಾಪ ಮಾಡುವುದಿಲ್ಲ
ಎಂದು ಆತ್ಮವು ಬೇಡುತ್ತದೆ. ಆದರೆ ರಾವಣನ ಪ್ರಪಂಚದಲ್ಲಿ ಪಾಪಗಳಂತೂ ಆಗಿಯೇ ಆಗುತ್ತವೆ. ಆದರೂ
ಪಾಪಗಳನ್ನು ಮಾಡತೊಡಗುತ್ತಾರೆ. ನೀವು ಅರ್ಧ ಕಲ್ಪ ಪಂಜರದ ಪಕ್ಷಿಗಳಾಗಿ ಬಿಡುತ್ತೀರಿ, ಕಳ್ಳ
ಕಾಕರಿಗೆ ಪಂಜರದ ಪಕ್ಷಿಗಳೆಂದು ಹೇಳುತ್ತಾರೆ. ಜೈಲಿನಿಂದ ಹೊರಗೆ ಬರುತ್ತಾರೆ ಮತ್ತೆ ಕಳ್ಳತನ
ಮಾಡುತ್ತಾ ಇರುತ್ತಾರೆ. ಪುನಃ ಜೈಲಿಗೆ ಹೋಗಬೇಕಾಗುತ್ತದೆ ಆದ್ದರಿಂದ ಪಂಜರದ ಪಕ್ಷಿಗಳೆಂದು
ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ, ಇದು ರಾವಣ ರಾಜ್ಯವಾಗಿದೆ. ಅಲ್ಲಂತೂ ಈ
ಮಾತುಗಳಿರುವುದಿಲ್ಲ, ಅದು ರಾಮ ರಾಜ್ಯವಾಗಿರುತ್ತದೆ. ಅಲ್ಲಿ ಗರ್ಭ ಜೈಲಾಗಲಿ, ಸ್ಥೂಲ ಜೈಲಾಗಲಿ
ಇರುವುದಿಲ್ಲ. ಇಲ್ಲಂತೂ ಎಷ್ಟೊಂದು ಮನುಷ್ಯರು ಜೈಲಿನಲ್ಲಿ ಬಿದ್ದಿರುತ್ತಾರೆ. ಗರ್ಭವೂ ಜೈಲಾಗಿದೆ
ಮತ್ತು ಆ ಜೈಲೂ ಸಹ ಇದೆ. ಡಬಲ್ ಜೈಲುಗಳಿವೆ, ಕಲಿಯುಗದ ಅಂತ್ಯವಲ್ಲವೆ.
ತಂದೆಯು ತಿಳಿಸುತ್ತಾರೆ
- ನೀವು ಮಕ್ಕಳು ಈಗ ನಿಮಾಣ ಮಾಡುತ್ತಿದ್ದೀರಿ, ಉನ್ನತಿ ಮತ್ತು ಅವನತಿ ಪ್ರತೀ ಕಲ್ಪವೂ ಆಗುತ್ತಲೇ
ಇರುತ್ತದೆ. ಪ್ರಪಂಚದ ಉನ್ನತಿ ಮತ್ತು ಅವನತಿಯಾಗುತ್ತದೆ, ಅದರಲ್ಲಿ ಮುಖ್ಯ ಪಾತ್ರವು ಭಾರತದ್ದಾಗಿದೆ.
ಪರಮಾತ್ಮ ಮತ್ತು ಆತ್ಮರು ಬಹಳಕಾಲ ಅಗಲಿ ಹೋಗಿದ್ದರು ಎಂದು ಹಾಡುತ್ತಿರುತ್ತಾರೆ. ಅದಕ್ಕೂ ಲೆಕ್ಕವು
ಬೇಕಲ್ಲವೆ. ಯಾವ ಆತ್ಮರು ಬಹಳ ಕಾಲದಿಂದ ಅಗಲಿ ಹೋಗಿದ್ದರೋ..... ಮೊಟ್ಟ ಮೊದಲು ದೇವಿ -ದೇವತಾ
ಧರ್ಮದ ಆತ್ಮರು ಪಾತ್ರವನ್ನಭನಯಿಸಲು ಬರುತ್ತಾರೆ, ಈಗ ಆ ದೇವತೆಗಳಿಲ್ಲ. ಅವರು ರಾಜ್ಯ ಮಾಡಿ
ಹೋಗುತ್ತಾರೆ, ಅವರ ಸಾಕ್ಷಿಯಾಗಿ ಚಿತ್ರಗಳಿರುತ್ತವೆ. ರಾಜ್ಯವಂತೂ ಸಮಾಪ್ತಿಯಾಯಿತು, ಸ್ವರ್ಗವೇ
ಸಮಾಪ್ತಿಯಾಗುತ್ತದೆ ನಂತರ ನರಕವಾಗುತ್ತದೆ ಮತ್ತೆ ನರಕವೂ ಸಮಾಪ್ತಿಯಾಗಿ ಸ್ವರ್ಗವಾಗುತ್ತದೆ ಅಂದಾಗ
ಹೊಸ ಪ್ರಪಂಚದ ಸ್ಥಾಪನೆ, ಹಳೆಯದರ ವಿನಾಶವಾಗುತ್ತದೆ. ಸ್ಥಾಪನೆಗಾಗಿ ಮಕ್ಕಳು ಬೇಕಲ್ಲವೆ. ಇರುವವರೂ
ನೀವೇ ಆಗಿದ್ದೀರಿ, ಮೊದಲು ನೀವು ದೈವೀ ಗುಣವಂತ ದೇವತೆಗಳಾಗಬೇಕಾಗಿದೆ. ಮನುಷ್ಯರಿಂದ
ದೇವತೆಗಳನ್ನಾಗಿ ಮಾಡಿದರು.... ಎಂಬುದೂ ಗಾಯನವಿದೆ. ಮನುಷ್ಯರು ಪತಿತರಾಗಿದ್ದಾರಲ್ಲವೆ.
ಭಗವಾನುವಾಚ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಾಗಬೇಕಾಗಿದೆ, ಈಗ ಈ ಮೃತ್ಯುಲೋಕದ
ಅಂತಿಮ ಜನ್ಮವಾಗಿದೆ. ಇದರಲ್ಲಿ ಪವಿತ್ರರಾಗಬೇಕಾಗಿದೆ. ಇದನ್ನು ಬಹಳ ಚೆನ್ನಾಗಿ ತಿಳಿಸಬೇಕು. ನಾವು
ಈ ಮೃತ್ಯುಲೋಕದ ಅಂತಿಮ ಜನ್ಮ ಪವಿತ್ರರಾಗಿರುತ್ತೇವೆ. ತಂದೆಯು ತಿಳಿಸುತ್ತಾರೆ - ವಿಕಾರಗಳ ಮೇಲೆ
ಜಯ ಗಳಿಸಿದರೆ ನೀವು ವಿಶ್ವದ ಮಾಲೀಕರಾಗುವಿರಿ. ಮಕ್ಕಳೂ ಸಹ ಕೇಳಿ ಮತ್ತೆ ಅನ್ಯರಿಗೆ ತಿಳಿಸುತ್ತೀರಿ,
ಈ ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ. ಇದು ಅದೇ ಮಹಾಭಾರತ ಯುದ್ಧವಾಗಿದೆ, ಕಾಮ
ಮಹಾಶತ್ರುವಾಗಿದೆ ಆದ್ದರಿಂದ ಪ್ರತಿಜ್ಞೆ ಮಾಡಿರಿ. ಈಗ ನೀವು ತಿಳಿದುಕೊಂಡಿದ್ದೀರಿ, ನಾವು
ಪವಿತ್ರರಾಗುತ್ತೇವೆ. ಈ ಹಳೆಯ ಪ್ರಪಂಚದ ವಿನಾಶವು ಅವಶ್ಯವಾಗಿ ಆಗಲಿದೆ. ಅದಕ್ಕೆ ಮೊದಲೇ
ಪವಿತ್ರರಾಗಬೇಕಾಗಿದೆ. ವಿನಾಶವಾದರೆ ಮತ್ತೆ ಮಾತೇ ಕೇಳಬೇಡಿ, ಹಾಹಾಕಾರವಾಗಿ ಬಿಡುತ್ತದೆ, ಬಹಳ
ಕಠಿಣ ಮೃತ್ಯುವಿರುತ್ತದೆ. ನೀವು ನೋಡುವುದಕ್ಕೂ ಸಾಧ್ಯವಿಲ್ಲ, ಹೇಗೆ ಯಾರಿಗಾದರೂ ಆಪರೇಷನ್
ಆಗುತ್ತದೆಯೆಂದರೆ ಅದನ್ನು ನಿರ್ಬಲರು ನೋಡಿ ತಡೆಯುವುದಿಲ್ಲ, ಮೂರ್ಛಿತರಾಗಿ ಬೀಳುತ್ತಾರೆ
ಆದ್ದರಿಂದ ವೈದ್ಯರು ಕುಟುಂಬದವರನ್ನು ಬರಲು ಬಿಡುವುದಿಲ್ಲ. ಈಗಂತೂ ಎಷ್ಟು ದೊಡ್ಡ ಆಪರೇಷನ್
ಆಗುವುದು. ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಾ ಇರುತ್ತಾರೆ, ಇದು ಕೊಳಕು ಪ್ರಪಂಚ, ಮುಳ್ಳುಗಳ
ಕಾಡಾಗಿದೆ. ಸತ್ಯಯುಗಕ್ಕೆ ಹೂದೋಟ, ಹೂವಿನ ಉದ್ಯಾನವನವೆಂದು ಹೇಳಲಾಗುತ್ತದೆ. ದೇವತೆಗಳು ಚೈತನ್ಯ
ಹೂಗಳಲ್ಲವೆ. ಮನುಷ್ಯರಂತೂ ತಿಳಿದುಕೊಳ್ಳುತ್ತಾರೆ, ಸ್ವರ್ಗದಲ್ಲಿ ಯಾವುದೋ ಹೂದೋಟವಿರುತ್ತದೆ ಎಂದು.
ಏನನ್ನು ಕೇಳಿಸಿಕೊಳ್ಳುವರೋ ಅದನ್ನೇ ಹೇಳಿ ಬಿಡುತ್ತಾರೆ. ಭಗವಂತನ ಹೂದೋಟವೆಂದು ಹೇಳುತ್ತಾರಲ್ಲವೆ.
ಧ್ಯಾನದಲ್ಲಿ ಹೋದಾಗಲೂ ಉದ್ಯಾನವನವನ್ನು ನೋಡುತ್ತಾರೆ, ಅಲ್ಲಾಹ್ನು ಕೈಯಲ್ಲಿ ಹೂ ಕೊಟ್ಟರು ಎಂದು
ಹೇಳುತ್ತಾರೆ. ಬುದ್ಧಿಯಲ್ಲಿಯೇ ಅಲ್ಲಾಹ್ನ ಹೂದೋಟವಿರುತ್ತದೆ ಆದ್ದರಿಂದ ಅದರಂತೆಯೇ ಕಾಣುತ್ತದೆ.
ಭಕ್ತಿಮಾರ್ಗದಲ್ಲಿ ಸಾಕ್ಷಾತ್ಕಾರಕ್ಕಾಗಿ ಭಕ್ತಿ ಮಾಡುತ್ತಾರೆ. ಸಾಕ್ಷಾತ್ಕಾರವಾಯಿತೆಂದರೆ ಭಗವಂತನು
ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ, ಏನು ಕಳೆದು ಹೋಯಿತೋ ಅದು ಪುನಃ ಆಗುವುದು. ಮಕ್ಕಳು ಯಾವ
ಉಡುಪಿನಲ್ಲಿ ಹೇಗೆ ಬಂದಿದ್ದೀರೋ ಅದೇ ಉಡುಪುಗಳಲ್ಲಿ ಕಲ್ಪದ ನಂತರವೂ ಬರುತ್ತೀರಿ. ಈ ನಾಟಕವನ್ನು
ಕೆಲವರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ತಂದೆಯ ಬಳಿ ಯಾರಾದರೂ ಬರುತ್ತಾರೆಂದರೆ ತಂದೆಯು
ಕೇಳುತ್ತಾರೆ, ಮೊದಲು ಎಂದಾದರೂ ಬಂದಿದ್ದೀರಾ? ಹೌದು ಬಾಬಾ, ಕಲ್ಪದ ಮೊದಲೂ ಸಹ ತಮ್ಮೊಂದಿಗೆ ಮಿಲನ
ಮಾಡಿದ್ದೆವು, ತಮ್ಮಿಂದ ಆಸ್ತಿಯನ್ನು ಪಡೆಯಲು ಬಂದಿದ್ದೆವು ಎಂದು ಹೇಳುತ್ತಾರೆ. ತಂದೆಯು
ಕೇಳುತ್ತಾರೆ, ಏನು ಪದವಿಯನ್ನು ಪಡೆದಿದ್ದಿರಿ? ಮಮ್ಮಾ-ಬಾಬಾ ಎಂದು ಹೇಳುತ್ತೇವೆ ಅಂದಮೇಲೆ
ಅವಶ್ಯವಾಗಿ ಅವರ ಮನೆತನದಲ್ಲಿ ಬರುತ್ತೇವೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಶ್ರೇಷ್ಠ ಪದವಿಯನ್ನು
ಪಡೆಯುವ ಪುರುಷಾರ್ಥ ಮಾಡಿರಿ. ಇವೆಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿವೆ. ಅವಶ್ಯವಾಗಿ ಯುದ್ಧವೂ
ಇದೆ, ನರಕದ ವಿನಾಶವಂತೂ ಆಗಲೇಬೇಕಾಗಿದೆ. ನಿಮ್ಮ ಬಳಿ ಒಳ್ಳೊಳ್ಳೆಯ ಚಿತ್ರಗಳಿವೆ. ಕೃಷ್ಣನ ಎರಡು
ಗೋಲಗಳಿರುವ ಚಿತ್ರವನ್ನೂ ಸಹ ಮಾಡಿಸಬೇಕು. ಇದರಲ್ಲಿ ಬಹಳ ಸ್ಪಷ್ಟವಾಗಿದೆ. ಸ್ವರ್ಗದ ದ್ವಾರವು
ತೆರೆಯುತ್ತದೆಯೆಂದರೆ ನರಕವು ಸಮಾಪ್ತಿಯಾಗುತ್ತದೆ, ನಿಮ್ಮ ಮುಖವು ಸ್ವರ್ಗದ ಕಡೆಯಿದೆ, ಇದು ಬಹಳ
ಅಕ್ಯುರೇಟ್ ಮಾತಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಾವೀಗ ಮನೆಗೆ ಹೋಗಬೇಕಾಗಿದೆ ಅಂದಮೇಲೆ
ಮನೆಯನ್ನೇ ನೆನಪು ಮಾಡಬೇಕಾಗಿದೆ. ಹಳೆಯ ಪ್ರಪಂಚವನ್ನು ಮರೆಯಬೇಕಾಗುತ್ತದೆ, ಇದಕ್ಕೆ ಬೇಹದ್ದಿನ
ವೈರಾಗ್ಯವೆಂದು ಹೇಳಲಾಗುತ್ತದೆ. ಹಳೆಯ ಪ್ರಪಂಚವನ್ನು ಬಿಟ್ಟು ನಾವು ತಂದೆಯ ಬಳಿ ಹೋಗುತ್ತೇವೆ,
ನೆನಪಿನ ಯಾತ್ರೆಯಿಂದಲೇ ಹೋಗುತ್ತೇವೆ. ಮುಖ್ಯವಾದುದು ನೆನಪಿನ ಮಾತಾಗಿದೆ. ನೆನಪನ್ನಂತೂ ಎಲ್ಲರೂ
ಮಾಡುತ್ತಾರಲ್ಲವೆ, ಈಗ ತಂದೆಯು ಯಥಾರ್ಥ ಮಾತನ್ನು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ.
ಇದು ಅವ್ಯಭಿಚಾರಿ ನೆನಪು ಜೊತೆಗೆ ಅರ್ಥ ಸಹಿತವಾಗಿದೆ. ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಯೂ
ಬಿಂದುವಾಗಿದ್ದಾರೆ. ತಮ್ಮನ್ನು ಆತ್ಮ ಬಿಂದುವೆಂದು ತಿಳಿಯಿರಿ, ತಂದೆಯನ್ನೂ ಬಿಂದುವೆಂದು
ತಿಳಿದುಕೊಳ್ಳಿ. ಹೊಸ ಮಾತನ್ನು ನೋಡಿ ಬೇಗನೆ ಮರೆತು ಹೋಗುತ್ತಾರೆ, ತಮ್ಮನ್ನು ಆತ್ಮನೆಂದು ತಿಳಿದು
ತಂದೆ ಮತ್ತು ತಮ್ಮ ಮನೆಯನ್ನು ನೆನಪು ಮಾಡಬೇಕಾಗಿದೆ. ಒಂದುವೇಳೆ ಬಿಂದುವು ಚಿಕ್ಕದೆನಿಸುತ್ತದೆ
ಎಂದರೆ ಮನೆಯಂತೂ ದೊಡ್ಡದಾಗಿದೆಯಲ್ಲವೆ. ಮನೆಯನ್ನು ನೆನಪು ಮಾಡಿರಿ, ತಂದೆಯೂ ಅಲ್ಲಿರುತ್ತಾರೆ.
ಎಲ್ಲಿ ತಂದೆಯಿರುವರೋ ಅಲ್ಲಿಗೆ ನಾವು ಹೋಗುತ್ತೇವೆ. ಬಿಂದುವು ನೆನಪಿಗೆ ಬರುವುದಿಲ್ಲವೆಂದರೆ
ಒಳ್ಳೆಯದು, ಮನೆಯಂತೂ ನೆನಪಿಗೆ ಬರುತ್ತದೆಯಲ್ಲವೆ. ಅದು ಶಾಂತಿಧಾಮ, ಮತ್ತೊಂದು ಸುಖಧಾಮವಾಗಿದೆ,
ಇದು ದುಃಖಧಾಮವಾಗಿದೆ. ನೀವೀಗ ನಂಬರ್ವಾರ್ ಪುರುಷಾರ್ಥದನುಸಾರ ಓದುತ್ತಿದ್ದೀರಿ ಮತ್ತೆ
ಸುಖಧಾಮದಲ್ಲಿ ಬರುತ್ತೀರಿ. ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಸ್ವರ್ಗದ ರಾಜ್ಯ
ಭಾಗ್ಯವು ಬೇಕಲ್ಲವೆ. ಕಲ್ಪದ ಮೊದಲೂ ಸಹ ಶಿವ ತಂದೆಯು ಬಂದಿದ್ದರು, ಸ್ವರ್ಗದ ರಾಜ್ಯ ಭಾಗ್ಯವನ್ನು
ನೀಡಿದ್ದರು, ನೀವು ಮರೆತು ಹೋಗಿದ್ದೀರಿ. ತಂದೆಯು ತಿಳಿಸುತ್ತಾರೆ - ನಿಮಗೆ ಆಸ್ತಿಯನ್ನು ಕೊಡಲು
ನಾನೀಗ ಪುನಃ ಬಂದಿದ್ದೇನೆ. ಎಷ್ಟು ಬಾರಿ ನೀವು ರಾಜ್ಯವನ್ನು ತೆಗೆದುಕೊಂಡಿದ್ದೀರಿ ಮತ್ತು
ಕಳೆದುಕೊಂಡಿದ್ದೀರಿ, ಲೆಕ್ಕವಿಲ್ಲದಷ್ಟು ಬಾರಿ ಆಸ್ತಿಯನ್ನು ಪಡೆದಿದ್ದೀರಿ ಆದರೂ ಇಂತಹ ತಂದೆಯನ್ನು
ಏಕೆ ಮರೆತು ಹೋಗುತ್ತೀರಿ? ಮಾಯೆಯ ಬಿರುಗಾಳಿಯಿಂದ ಬಹಳ ಯುದ್ಧವಾಗುತ್ತದೆ ಆದ್ದರಿಂದ ನಾಟಕವನ್ನೂ
ತೋರಿಸುತ್ತಾರೆ – ಮಾಯೆಯು ಒಂದು ಕಡೆ ಎಳೆಯುತ್ತದೆ, ಪ್ರಭು ಇನ್ನೊಂದು ಕಡೆ ಎಳೆಯುತ್ತಾರೆ.
ಜ್ಞಾನದಲ್ಲಿ ವಿಘ್ನ ಬೀಳುವುದಿಲ್ಲ, ನೆನಪಿನಲ್ಲಿಯೇ ವಿಘ್ನವಾಗುತ್ತದೆ, ಇದರಲ್ಲಿಯೇ ಪರಿಶ್ರಮವಿದೆ.
ಈಗ ತಂದೆಯು ತಿಳಿಸುತ್ತಾರೆ - ಮಹಾರಥಿಗಳಾಗಿರಿ, ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ. ಈ
ಯಜ್ಞದಲ್ಲಿ ಇಡೀ ಹಳೆಯ ಪ್ರಪಂಚವು ಸ್ವಾಹಾ ಆಗುವುದು ಅಂದಮೇಲೆ ಮಹಾವೀರರಾಗಬೇಕಾಗಿದೆ. ನೀವು ಮಕ್ಕಳು
ಅಟಲ, ಅಖಂಡ, ಅಡೋಲ ರಾಜ್ಯವನ್ನು ಪಡೆಯಬೇಕಾಗಿದೆ. ನಿಮ್ಮ ಬುದ್ಧಿ ಯೋಗವು ತಂದೆಯ ಜೊತೆ ಈ
ರೀತಿಯಿರಲಿ ಭಲೆ ಎಷ್ಟೊಂದು ಬಿರುಗಾಳಿಗಳು ಬರಲಿ ಮಾಯೆಯು ಏನೂ ಮಾಡಲು ಸಾಧ್ಯವಾಗಬಾರದು. ಇದು
ನಿಮ್ಮ ಅಂತಿಮದ ಸ್ಥಿತಿಯಾಗಿದೆ. ಹೇಗೆ ವರ್ಗಾವಣೆಯಾಗುವಾಗ ಶಾಲೆಯಲ್ಲಿ ಅಂತಿಮದಲ್ಲಿ
ಪರೀಕ್ಷೆಯಿರುತ್ತದೆ, ನಿಮ್ಮ ಮಾಲೆಯು ಅಂತಿಮದಲ್ಲಿ ಆಗುವುದು. ನಾವು ಈ ರೀತಿಯಾಗುತ್ತೇವೆ, ಇಂತಹವರು
ಈ ಪದವಿ ಪಡೆಯುವರು, ಇವರು ದಾಸಿಯಾಗುವರು, ಇದೆಲ್ಲವೂ ನಿಮಗೆ ಸಾಕ್ಷಾತ್ಕಾರವಾಗುವುದು. ಆ
ಸಮಯದಲ್ಲಂತೂ ಏನೂ ಮಾಡಲು ಸಾಧ್ಯವಿಲ್ಲ, ಪಶ್ಚಾತ್ತಾಪ ಪಡಬೇಕಾಗುವುದು - ನಾನು ಏನು ಮಾಡಿ ಬಿಟ್ಟೆನು!
ಶ್ರೀಮತದಂತೆ ಏಕೆ ನಡೆಯಲಿಲ್ಲ! ಆದರೆ ಆ ಸಮಯದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಹೀಗೆ ಅನೇಕರು
ಪಶ್ಚಾತ್ತಾಪ ಪಡುವರು. ಹೇಗೆ ಮನುಷ್ಯರು ಯಾರನ್ನಾದರೂ ಕೊಲೆ ಮಾಡಿ ನಂತರ ಪಶ್ಚಾತ್ತಾಪ ಪಡುತ್ತಾರೆ
ಆದರೆ ಕೊಲೆ ಆಗಿ ಹೋಯಿತೆಂದ ಮೇಲೆ ಮತ್ತೇನು ಮಾಡಲು ಸಾಧ್ಯ! ಆದ್ದರಿಂದ ತಂದೆಯು ತಿಳಿಸುತ್ತಾರೆ -
ಹುಡುಗಾಟಿಕೆ ಮಾಡಬೇಡಿ, ತಮ್ಮ ಪುರುಷಾರ್ಥ ಮಾಡುತ್ತಾ ಇರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. 84 ಜನ್ಮಗಳ
ನಾಟಕವು ಈಗ ಮುಕ್ತಾಯವಾಗುತ್ತದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ
ಆತ್ಮಾಭಿಮಾನಿಯಾಗಿದ್ದು ಪಾವನರಾಗಬೇಕಾಗಿದೆ. ದೇಹಾಭಿಮಾನವನ್ನು ಕಳೆಯಬೇಕಾಗಿದೆ.
2. ಅರ್ಥ ಸಹಿತವಾಗಿ
ತನ್ನನ್ನು ಆತ್ಮ ಬಿಂದುವೆಂದು ತಿಳಿದು ಬಿಂದು ತಂದೆಯ ಅವ್ಯಭಿಚಾರಿ ನೆನಪಿನಲ್ಲಿರಬೇಕಾಗಿದೆ.
ಮಹಾವೀರರಾಗಿ ತಮ್ಮ ಸ್ಥಿತಿಯನ್ನು ಅಚಲ, ಅಡೋಲವನ್ನಾಗಿ ಮಾಡಿಕೊಳ್ಳಬೇಕಾಗಿದೆ.
ವರದಾನ:
ವ್ಯರ್ಥದ
ಲೀಕೇಜ್ನ್ನು ಸಮಾಪ್ತಿಗೊಳಿಸಿ ಸಮರ್ಥರಾಗುವಂತಹ ಕಡಿಮೆ ಖರ್ಚಿನಲ್ಲಿ ಬಹಳ ಪ್ರಸಿದ್ಧ ಭವ(ರಾಗಿರಿ).
ಸಂಗಮ ಯುಗದಲ್ಲಿ
ಬಾಪ್ದಾದಾರವರ ಮೂಲಕ ಯಾವುದೆಲ್ಲಾ ಖಜಾನೆಗಳು ಸಿಕ್ಕಿವೆ, ಆ ಎಲ್ಲಾ ಖಜಾನೆಗಳನ್ನು ವ್ಯರ್ಥದಲ್ಲಿ
ಹೋಗುವುದರಿಂದ ಉಳಿತಾಯ ಮಾಡುತ್ತೀರೆಂದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಸಿದ್ಧರಾಗುತ್ತೀರಿ.
ವ್ಯರ್ಥದಿಂದ ಉಳಿತಾಯ ಮಾಡುವುದು ಎಂದರೆ ಸಮರ್ಥರಾಗುವುದು. ಎಲ್ಲಿ ಸಮರ್ಥತೆಯಿದೆ ಅಲ್ಲಿ
ವ್ಯರ್ಥವಾಗಿ ಹೋಗಲು ಸಾಧ್ಯವೇ ಇಲ್ಲ. ಒಂದುವೇಳೆ ವ್ಯರ್ಥದ ಲೀಕೇಜ್ ಇದೆಯೆಂದರೆ ಎಷ್ಟಾದರೂ
ಪುರುಷಾರ್ಥ ಮಾಡಿರಿ, ಪರಿಶ್ರಮ ಪಡಬಹುದು ಆದರೆ ಶಕ್ತಿಶಾಲಿ ಆಗಲು ಸಾಧ್ಯವಿಲ್ಲ ಆದ್ದರಿಂದ
ಲೀಕೇಜ್ನ್ನು ಪರಿಶೀಲನೆ ಮಾಡುತ್ತಾ ಸಮಾಪ್ತಿ ಮಾಡುತ್ತೀರೆಂದರೆ, ವ್ಯರ್ಥದಿಂದ ಸಮರ್ಥರು ಆಗಿ
ಬಿಡುತ್ತೀರಿ.
ಸ್ಲೋಗನ್:
ಪ್ರವೃತ್ತಿಯಲ್ಲಿರುತ್ತಾ ಸಂಪೂರ್ಣ ಪವಿತ್ರರಾಗುವುದೇ ಯೋಗಿ ಅಥವಾ ಜ್ಞಾನಿ ಆತ್ಮನ ಚಾಲೆಂಜ್ ಆಗಿದೆ.
ಅವ್ಯಕ್ತ ಸೂಚನೆಗಳು:-
ಅಪವಿತ್ರತೆಯ ಬೀಜವನ್ನು ಸಮಾಪ್ತಿ ಮಾಡಿ ಸಂಪೂರ್ಣ ಸ್ವಚ್ಛ ( ಪವಿತ್ರ ) ಆಗಿರಿ.
ಪರಮಾತ್ಮನ ಜ್ಞಾನದ
ನವೀನತೆ ಪವಿತ್ರತೆಯಾಗಿದೆ. ನಶೆಯಿಂದ ಹೇಳುತ್ತೀರಿ ಅಲ್ಲವೇ, ಬೆಂಕಿ - ಹತ್ತಿ ಒಟ್ಟಿಗೆ ಇದ್ದರು
ಬೆಂಕಿ ಹೊತ್ತುಕೊಳ್ಳುವುದಿಲ್ಲ. ತಾವು ಭಾಷಣಗಳಲ್ಲಿ ಹೇಳುತ್ತೀರಿ - ಪವಿತ್ರತೆ ಇಲ್ಲದೆ ಯೋಗಿ
ಆತ್ಮ, ಜ್ಞಾನಿ ಆತ್ಮ ಆಗಲು ಸಾಧ್ಯವಿಲ್ಲ. ಈ ಚಾಲೆಂಜನ್ನು ಈಗ ಪ್ರಾಕ್ಟಿಕಲ್ ರೂಪದಲ್ಲಿ
ತೆಗೆದುಕೊಂಡು ಬನ್ನಿ.